ADVERTISEMENT

ಸುಂದರ ಉದ್ಯಾನದ ಉದ್ದೇಶ

ಅಮಾನಿಕೆರೆ ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳ ತಂಡ; ಶಾಲಿನಿ ರಜನೀಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 12:44 IST
Last Updated 7 ಸೆಪ್ಟೆಂಬರ್ 2019, 12:44 IST
ಅಮಾನಿಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಲಿನಿ ರಜನೀಶ್.
ಅಮಾನಿಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಲಿನಿ ರಜನೀಶ್.   

ತುಮಕೂರು: ಹೂಳು ತುಂಬಿಕೊಂಡಿದ್ದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯು ಸ್ಮಾರ್ಟ್ ಸಿಟಿ ಯೋಜನೆಯಡಿ ಭರದಿಂದ ಸಾಗಿದೆ. ಶನಿವಾರ ತಾಂತ್ರಿಕ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿತು.

ಈ ವೇಳೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ‘ತುಮಕೂರಿನ ಹೆಮ್ಮೆ ಎಂದೇ ಬಿಂಬಿತವಾಗಿರುವ ಅಮಾನಿಕೆರೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರಮಕೈಗೊಳ್ಳಲಾಗಿದೆ’ ಎಂದರು.

ಬಂಡ್ ಅಭಿವೃದ್ಧಿ, ಬೋಟಿಂಗ್ ಕೊಳದ ಅಭಿವೃದ್ಧಿ, ಸೈಕಲ್ ಟ್ರ್ಯಾಕ್, ಫುಟ್‌ಪಾತ್ ಮತ್ತು ಕಾರ್ ಪಾತ್‌ವೇ ಅಭಿವೃದ್ಧಿ, ವಾರಾಂತ್ಯದ ಸಂಗೀತ ಕಾರಂಜಿ, ಮಕ್ಕಳ ಆಟಿಕೆ ಜಾಗ, ಮಕ್ಕಳಿಗೆ ಉದ್ಯಾನ, ಯೋಗಕೇಂದ್ರ, ಪಕ್ಷಿಗಳಿಗೆ ಉತ್ತಮ ಆವಾಸಸ್ಥಾನ ಕಲ್ಪಿಸುವುದು, ಅವುಗಳ ಸಂತಾನ ಅಭಿವೃದ್ಧಿಗೆ ದ್ವೀಪಗಳ ಅಭಿವೃದ್ಧಿ ಸೇರಿದಂತೆ ಸುಂದರ ಉದ್ಯಾನವಾಗಿ ಕೆರೆಯನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಅಮಾನಿಕೆರೆ 504 ಎಕರೆಯಲ್ಲಿ ಇದೆ. ಕೆರೆ ಹೂಳೆತ್ತುವ ಕಾಮಗಾರಿ ತ್ವರಿತವಾಗಿ ಸಾಗುತ್ತಿದೆ. ಇದರಿಂದ ಹೇಮಾವತಿ ನದಿ ನೀರನ್ನು ತುಂಬಿಸಲು ಅನುಕೂಲ ಆಗುತ್ತದೆ ಎಂದರು.

ಕೆರೆಯ ಸುತ್ತ ವಿವಿಧ ಹೂವಿನ ಗಿಡಗಳನ್ನು ನೆಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ಕಾಮಗಾರಿ ಪ್ರಗತಿ ಪರಿಶೀಲಿಸಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಹೊರಪೇಟೆ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ರಸ್ತೆ ಕಾಮಗಾರಿ ವೀಕ್ಷಿಸಿದರು. ಬೆಸ್ಕಾಂ ಮತ್ತು ಬಿಎಸ್‌ಎನ್‌ಎಲ್ ಕೇಬಲ್ ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಾರಿಯಮ್ಮನಗರದಲ್ಲಿ ಬಡ ನಗರವಾಸಿಗಳ ವಸತಿ ಸಮುಚ್ಚಯ ಕಾಮಗಾರಿ ಪರಿಶೀಲಿಸಿ ತಾಂತ್ರಿಕ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಟೌನ್‌ಹಾಲ್ ಬಳಿಯ ಸಾರ್ವಜನಿಕ ಗ್ರಂಥಾಲಯ ಕಾಮಗಾರಿ ವೀಕ್ಷಿಸಿದರು.

ಇಂಟಿಗ್ರೇಟೆಡ್ ಕಮ್ಯಾಂಡ್ ಮ್ಯಾನೇಜ್‌ಮೆಂಟ್ ಕಂಟ್ರೋಲ್ (ಐಸಿಟಿಸಿ)ಗೆ ಭೇಟಿ ನೀಡಿ, ನಗರದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ಹಾಗೂ ಟ್ರಾಫಿಕ್ ಸಿಗ್ನಲ್‌ಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು.

ನಂತರ ಸ್ಮಾರ್ಟ್‌ಸಿಟಿಯ ಕಚೇರಿಯಲ್ಲಿ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಸ್ಮಾರ್ಟ್ ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಭೂಬಾಲನ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.