ತಿಪಟೂರು:ತಾಲ್ಲೂಕಿನ ಮಂಜುನಾಥ ನಗರ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿ ಸಂದರ್ಭದಲ್ಲಿ ಕಲ್ಲುಬಂಡೆ ಸಿಡಿಸಲು ‘ತೀವ್ರವಲ್ಲದ ನಿಯಂತ್ರಿತ ಸ್ಫೋಟಕ’ ಬಳಸಿದ್ದು, ಸ್ಫೋಟದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ನಾಲ್ಕೈದು ದಿನಗಳಿಂದ ನಿತ್ಯವೂ ಸ್ಫೋಟಕ ಬಳಸುತ್ತಿದ್ದಾರೆ. ಇದರಿಂದ ಸುತ್ತಲಿನ ಮನೆಗಳಲ್ಲಿನ ಪಾತ್ರೆಗಳು ಅಲುಗಾಡಿ ಬೀಳುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಕಾಮಗಾರಿ ಸಂದರ್ಭ ಸ್ಫೋಟಕ ಬಳಸುವುದಾದರೆ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಆದರೆ ಯಾವುದೇ ಮಾಹಿತಿ ನೀಡದಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಭೂಸ್ವಾಧೀನವೇ ಆಗಿಲ್ಲ. ಆದಾಗ್ಯೂ ಕಾಮಗಾರಿ ನಡೆಸಲು, ಕಲ್ಲುಬಂಡೆ ಸ್ಫೋಟಿಸಲು ನಿರಾಕ್ಷೇಪಣಾ ಪತ್ರವನ್ನು ಗ್ರಾಮ ಪಂಚಾಯಿತಿಯಿಂದ ಪಡೆದಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಹಸಿರು ಸೇನೆ ತಾಲ್ಲೂಕು
ಘಟಕದ ಅಧ್ಯಕ್ಷ ದೇವರಾಜು ತಿಳಿಸಿದರು.
ಕಲ್ಲುಬಂಡೆ ಸಿಡಿಸಲು ಸ್ಫೋಟಕ ಬಳಸುತ್ತಿರುವುದರಿಂದ ಪರಿಸರದ ಮೇಲೆ ಹಾನಿ ಆಗುತ್ತದೆ. ಜೊತೆಗೆ ಅಂತರ್ಜಲಕ್ಕೂ ಕುತ್ತು ಬರುತ್ತದೆ. ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭೈರನಾಯಕನಹಳ್ಳಿ ನಿವಾಸಿ ಮನೋಹರ್ ಪಟೇಲ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.