ಮಧುಗಿರಿ: ಹೇಮಾವತಿ ಲಿಂಕ್ ಕೆನಾಲ್ನಿಂದ ತುಮಕೂರು ಜಿಲ್ಲೆ ಜನರಿಗೆ ಸಾಕಷ್ಟು ಅನ್ಯಾಯವಾಗಲಿದೆ. ತಕ್ಷಣ ಈ ಕಾಮಗಾರಿ ನಿಲ್ಲಿಸಬೇಕೆಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದಿಂದ ಸೋಮವಾರ ನ್ಯಾಯಾಲಯ ಮುಂಭಾಗ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾ ರೆಡ್ಡಿ ಮಾತನಾಡಿ ಪಾವಗಡ, ಕೊರಟಗೆರೆ , ಶಿರಾ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ವ್ಯವಸ್ಥೆ ಇಲ್ಲದೆ ಮಳೆಯನ್ನೇ ನಂಬಿಕೊಂಡು ರೈತರು ಹಾಗೂ ಜನರು ಜೀವನ ನಡೆಸುತ್ತಿದ್ದಾರೆ. ಈ ನಾಲ್ಕು ತಾಲ್ಲೂಕುಗಳು ಬರಗಾಲ ಪೀಡಿತ ಪ್ರದೇಶವಾಗಿವೆ. ಕುಡಿಯುವ ನೀರಿಗೂ ಜನರು ಪರದಾಡುತ್ತಾರೆ.
ಜಿಲ್ಲೆಯ ಬರಪೀಡಿತ ತಾಲ್ಲೂಕುಗಳಿಗೆ ಈಗಾಗಲೇ ನಿಗದಿಪಡಿಸಿರುವ ಹೇಮಾವತಿ ನದಿ ನೀರು ಇತರ ತಾಲ್ಲೂಕುಗಳಿಗೆ ಹರಿಯಲು ಬಿಡುವುದಿಲ್ಲ. ‘ನಮ್ಮ ಜಿಲ್ಲೆ ನೀರು, ನಮ್ಮ ಹಕ್ಕು’ ಇದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ವಕೀಲರಾದ ಪಂಚಾಕ್ಷರಯ್ಯ, ನಾಗರಾಜು, ತಿಮ್ಮರಾಜು, ರಂಗನಾಥ್, ಆಶೋಕ್, ಎಚ್.ವಿ.ಮಂಜುನಾಥ್,ನಾಗಭೂಷಣ್,ಆನಂದ್,ಪುಷ್ವಲತಾ,ಅನ್ನಪೂರ್ಣ,ಮಹೇಶ್,ದೇವರಾಜು,ಜಗದೀಶ್, ಆಶ್ವಥ್ ನಾರಾಯಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.