ತುಮಕೂರು: ಅನಾರೋಗ್ಯದ ನಡುವೆಯೂ ಅನ್ನಪೂರ್ಣ ವೆಂಕಟನಂಜಪ್ಪ ಅವರು ಕ್ರಿಯಾಶೀಲರಾಗಿಯೇ ಬದುಕಿದ್ದರು. ನಿರಂತರವಾಗಿ ಸಾಮಾಜಿಕ ಸಂಘಟನೆಗಳ ಜತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಸ್ಮರಿಸಿದರು.
ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅವರಿಗೆ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಲೇಖಕಿಯಾಗಿ ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದು, ನಗರಸಭೆ ಚುನಾವಣೆಗಳಿಗೆ ಸ್ಪರ್ಧಿಸಿದರೂ ಅವಕಾಶ ಸಿಗಲಿಲ್ಲ. ತಪ್ಪುಗಳನ್ನು ಖಂಡಿಸುವ ಮನೋಧರ್ಮ ಅವರಲ್ಲಿತ್ತು ಎಂದರು.
ಪರಿಷತ್ ಕಾರ್ಯದರ್ಶಿ ರಾಕ್ಲೈನ್ ರವಿಕುಮಾರ್, ‘ಸಮಾಜಮುಖಿಯಾಗಿ ಬೆಳೆದಿದ್ದ ಅನ್ನಪೂರ್ಣ ವೆಂಕಟನಂಜಪ್ಪ ಅವರೊಂದಿಗೆ ಬಹಳ ವರ್ಷಗಳ ಕಾಲ ಆತ್ಮೀಯತೆ ಇತ್ತು’ ಎಂದು ಹೇಳಿದರು.
ಲೇಖಕಿ ಬಿ.ಸಿ.ಶೈಲಾನಾಗರಾಜ್, ‘ಕ್ರಿಯೆಗೆ ಪ್ರತಿಕ್ರಿಯೆ ಅವರ ಸಹಜ ಗುಣವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಕರೆಮಾಡಿ, ಸಂದೇಶ ಕಳುಹಿಸಿ ಮತದಾನಕ್ಕೆ ಪ್ರೇರೇಪಿಸುವ ಗುಣ ಮೆಚ್ಚುವಂತಹದ್ದು’ ಎಂದು ತಿಳಿಸಿದರು.
ಲೇಖಕಿ ಎಂ.ಸಿ.ಲಲಿತ, ‘ದೈಹಿಕವಾಗಿ ಕೆಲವೊಮ್ಮೆ ಅನಾರೋಗ್ಯಕ್ಕೆ ಒಳಗಾದರೂ ಮಾನಸಿಕವಾಗಿ ಕ್ರಿಯಾಶೀಲತೆಯಿಂದ ಇರುತ್ತಿದ್ದ ರೀತಿ ಅತ್ಯಂತ ಆಶ್ಚರ್ಯಕರ’ ಎಂದು ನೆನಪು ಮಾಡಿಕೊಂಡರು.
ಲೇಖಕಿ ಜಿ.ಮಲ್ಲಿಕಾ ಬಸವರಾಜು, ‘ವಿವಿಧ ಸಂಘಟನೆಗಳ ಜತೆ ಗುರುತಿಸಿಕೊಳ್ಳುವ ಹಂಬಲ ಇತ್ತು. ಸದಾ ಚಟುವಟಿಕೆಯಿಂದ ಬೆರೆಯುತ್ತಿದ್ದರು’ ಎಂದರು.
ಪತ್ರಕರ್ತ ಜಿ.ಇಂದ್ರಕುಮಾರ್, ಪರಿಸರವಾದಿ ಚಂದ್ರಮ್ಮ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಕಸಾಪ ತಿಪಟೂರು ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ, ಉಪನ್ಯಾಸಕ ಎಂ.ಗೋವಿಂದರಾಯ, ಡಾ.ಬಸವರಾಜು, ಪಾವಗಡ ಶ್ರೀರಾಮ್, ಸಿ.ಎಲ್.ಸುನಂದಮ್ಮ, ಮೆಳೆಹಳ್ಳಿ ದೇವರಾಜು, ಸಿ.ಎನ್.ಸುಗುಣಾದೇವಿ, ಗೀತಾ ನಾಗೇಶ್, ರಾಣಿ ಚಂದ್ರಶೇಖರ್, ಮಮತ ರವಿಕುಮಾರ್, ಶಾಲಿನಿ, ಚನ್ನಬಸವಯ್ಯ ಗುಬ್ಬಿ, ಮಂಜುಳ ಮುಂತಾದವರು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.