ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.
ನಾಮಪತ್ರ ಸಲ್ಲಿಸುವ ಕೆಲಸ ಮುಗಿದಿದ್ದು, ಇನ್ನೂ ಮತದಾರರಾದ ಸ್ಥಳೀಯ ಸಂಸ್ಥೆಯ ಸದಸ್ಯರನ್ನು ಓಲೈ
ಸುವಕೆಲಸದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ನಿರತರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿಯವರು ಈಗಾಗಲೇ ಸಮಾವೇಶ ನಡೆಸಿ ಪ್ರಚಾರಕ್ಕೆ ಚಾಲನೆ ನೀಡಿದ್ದರೆ, ಮಂಗಳವಾರ ಜೆಡಿಎಸ್ನವರು ‘ಜನತಾ ಸಂಗಮ’ ಸಮಾವೇಶ ಸಂಘಟಿಸುವ ಮೂಲಕ ಪ್ರಚಾರಕ್ಕೆ ಇಳಿದಿದ್ದಾರೆ.
ಮಂಗಳವಾರ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳುಹಿಂದುಮುಂದು ನೋಡಿದರು. ಕೊನೆ ದಿನವಾಗಿದ್ದು, ಅನಿವಾರ್ಯವಾಗಿ ಸಲ್ಲಿಸಿದರು. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇಂದೇ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ‘ವಿಶ್ವಾಸ’ದಿಂದ ಕಣಕ್ಕೆ ಇಳಿದಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮತ್ತೊಮ್ಮೆ ತಮ್ಮ ನಾಯಕರ ಜತೆ ಬಂದು ಬಿ ಫಾರಂ ಜತೆಗೆ ನಾಮಪತ್ರ ಸಲ್ಲಿಸಿದರು. ಶಾಸಕ ಡಾ.ಜಿ.ಪರಮೇಶ್ವರ, ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಷಫಿಅಹಮ್ಮದ್, ರಫಿಕ್ ಅಹ್ಮದ್, ವೆಂಕಟರಮಣಪ್ಪ, ಕೆ.ಷಡಕ್ಷರಿ ಮೊದಲಾದ ಮುಖಂಡರು ಜತೆಗಿದ್ದರು.
ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ತಮ್ಮ ಉಮೇದುವಾರಿಕೆ ದಾಖಲಿಸಿದರು. ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಶಾಸಕರಾದ ಜ್ಯೋತಿಗಣೇಶ್, ಎನ್.ರವಿಕುಮಾರ್, ಚಿದಾನಂದಗೌಡ, ಮುಖಂಡ ಬಿ.ಸುರೇಶ್ಗೌಡ ಇತರರು ಇದ್ದರು.
ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಕೆ.ಎಂ.ತಿಮ್ಮರಾಯಪ್ಪ, ಸಿ.ಬಿ.ಸುರೇಶ್ಬಾಬು, ಸುಧಾಕರಲಾಲ್, ಎಂ.ವಿ.ವೀರಭದ್ರಯ್ಯ, ತಿಪ್ಪೇಸ್ವಾಮಿ ಜತೆಗಿದ್ದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಕೆ.ಎಸ್.ಗಜೇಂದ್ರ ಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಆರ್.ಜಯರಾಮಯ್ಯ ನಾಮಪತ್ರ ಸಲ್ಲಿಸಿದರು. ಕೊನೆಯ ದಿನ ಒಟ್ಟು 5 ಮಂದಿ 8 ನಾಮಪತ್ರ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.