ತುರುವೇಕೆರೆ: ‘ಆಪರೇಷನ್ ಸಿಂಧೂರ್’ನ ಯಶಸ್ಸನ್ನು ಪ್ರಧಾನಿಗೆ ನೀಡದೆ ಸೈನಿಕರಿಗೆ ನೀಡಬೇಕು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು ಖಂಡನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಯುದ್ಧ ನಡೆಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತವರ ಕ್ಯಾಬಿನೆಟ್. ಇವರಿಗೆ ಈ ಸಂಘರ್ಷದ ಗೆಲುವಿನ ಕ್ರೆಡಿಟ್ ಕೊಡಬೇಕು ಎಂದು ಪ್ರತಿಪಾದಿಸಿದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿದಿನ ಈ ಬಗ್ಗೆ ಜಾಹೀರಾತು ಕೂಡ ನೀಡುತ್ತಿದ್ದಾರೆ. ರಾಜ್ಯದ ತೆರಿಗೆದಾರರ ಹಣದಿಂದಲೇ ಈ ಯೋಜನೆಗಳು ನಡೆಯುತ್ತಿವೆಯೇ ಹೊರೆತು ಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಪಕ್ಷದ ಫಂಡ್ನಿಂದಲ್ಲ. ಹೀಗಿರುವಾಗ ಗ್ಯಾರಂಟಿಗಳ ಯಶಸ್ಸಿನ ಕೊಡುಗೆಯನ್ನು ರಾಜ್ಯದ ತೆರಿಗೆದಾರರಿಗೆ ನೀಡಬೇಕೆ ಹೊರತು ಸಿದ್ದರಾಮಯ್ಯ ಅವರಿಗಲ್ಲ ಎಂದರು.
‘ಮೇ 20ರಂದು ಹೊಸಪೇಟೆಯಲ್ಲಿ ನಡೆಯುವ ಸಮರ್ಪಣೆ ಸಂಕಲ್ಪ ಕಾರ್ಯಕ್ರಮಕ್ಕೆ ಜನರಿಗೆ ಹಣ ಕೊಟ್ಟು ಕರೆದುಕೊಂಡು ಹೋಗುತ್ತಿರುವುದು ನಾಚಿಕೆಗೇಡು’ ಎಂದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಚುನಾವಣೆ ಸಮೀಪಿಸುತ್ತಿರುವಾಗಲೇ ಸ್ಪಷ್ಟ ಕಾರಣ ನೀಡದೇ 8,200 ಮತದಾರರನ್ನು ವಜಾಮಾಡಿದ್ದು, ಇದು ಕಾನೂನುಬಾಹಿರ. ಈ ಬಗ್ಗೆ ಡಿಸ್ಟಿಕ್ ರಿಜಿಸ್ಟಾರ್ ಆಫ್ ಕೊ ಆಪರೇಟೀವ್ ಸೊಸೈಟಿ ಅಧಿಕಾರಿಗಳಿಗೆ ಪತ್ರ ಬರೆದು, ಸಮಗ್ರ ತನಿಖೆಗೆ ಒತ್ತಾಯಿಸುತ್ತೇನೆ ಎಂದರು.
ಗೋಷ್ಠಿಯಲ್ಲಿ ವೆಂಕಟಾಪುರ ಯೋಗೀಶ್, ಮಂಗಿಕುಪ್ಪೆ ಬಸವರಾಜು, ದೇವರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.