ಪಾವಗಡ: ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ವಿತರಿಸಬೇಕಿದ್ದ ಹಾಲನ್ನು ಸರ್ಕಾರಿ ನೌಕರರಿಗೆ, ಪಕ್ಷದ ಮುಖಂಡರಿಗೆ, ಶ್ರೀಮಂತರಿಗೆ ವಿತರಿಸಲಾಗಿದೆ ಎಂದು ಶನಿವಾರ ಸಾರ್ವಜನಿಕರು ಆರೋಪಿಸಿದರು.
ಪಟ್ಟಣದ ಎ.ಡಿ. ಕಾಲೋನಿ, ಎ.ಕೆ ಕಾಲೋನಿ, ಆಫ್ ಬಂಡೆ, ರೊಪ್ಪ ಬಡಾವಣೆ ಸೇರಿದಂತೆ 16 ಬಡಾವಣೆಗಳ 3,445 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಒಂದು ಲೀಟರ್ ಹಾಲು ವಿತರಿಸಬೇಕಿತ್ತು.
ಕೊಳೆಗೇರಿಗಳ ಬಡ ಕುಟುಂಬಗಳಿಗೆ ಹಾಲು ವಿತರಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ಆದರೆ ಪುರಸಭೆ ಸದಸ್ಯರು ತಾವು ಗೆದ್ದು ಬಂದ ಬಡಾವಣೆಗಳ ಶ್ರೀಮಂತ, ಸರ್ಕಾರಿ ನೌಕರ, ಪಕ್ಷಗಳ ಮುಖಂಡರ ಕುಟುಂಬಗಳಿಗೆ ಹಾಲು ವಿತರಿಸುತ್ತಿದ್ದಾರೆ ಎಂದು ಜನತೆ ದೂರಿದ್ದಾರೆ.
ಬಡ ಕುಟುಂಬಗಳಿಗೆ ಅರ್ಧ ಲೀಟರ್ ಹಾಲು ಕೊಟ್ಟು ಇತರೆ ಪ್ರಭಾವಿಗಳ ಕುಟುಂಬಗಳಿಗೆ ಅರ್ಧ ಲೀಟರ್ ಹಾಲು ವಿತರಿಸಲಾಗಿದೆ. ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತಿಲ್ಲ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಪುರಸಭೆ ಸದಸ್ಯರೊಬ್ಬರು ಪ್ರಭಾವಿಗಳಿಗೆ ಹಾಲು ವಿತರಿಸುವ ಫೋಟೋ ಹಂಚಿಕೊಂಡು ಜನರು ಟೀಕಿಸಲಾಗುತ್ತಿದೆ. ಹಾಲು ಕೊಟ್ಟು ಫೋಟೋಗಳಿಗೆ ಫೋಸ್ ಕೊಡುತ್ತಿರುವವರ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಪ್ರತಿಕ್ರಿಯಿಸಿ, 16 ಬಡಾವಣೆಗಳ 3,445 ಕುಟುಂಬಗಳಿಗೆ ಹಾಲು ವಿತರಿಸಲು ಪಟ್ಟಿ ನೀಡಲಾಗಿದೆ. ಹಾಲು ವಿತರಿಸುವ ಕೆಲಸವನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಹಂಚಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.