ತುಮಕೂರು: ಶಿರಾ ತಾಲ್ಲೂಕಿನ ತುಪ್ಪದಕೋಣ ಸಾಕ್ಷಿಹಳ್ಳಿ ಗ್ರಾಮಸ್ಥರು, ನಾಗರಿಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜ್, ಕಾರ್ಯದರ್ಶಿ ತೇಜಸ್ ಕುಮಾರ್ ಖಂಡಿಸಿದ್ದಾರೆ.
ಸಾಕ್ಷಿಹಳ್ಳಿ ಗ್ರಾಮಸ್ಥರ ಮೇಲೆ ಪೊಲೀಸರು ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಶಿರಾ ಪೊಲೀಸ್ ಠಾಣೆಗೆ ಹಾಜರಾದ ಸಮಯದಲ್ಲಿ ಗ್ರಾಮದ 12 ಮಂದಿಯ ಮೇಲೆ ಇನ್ಸ್ಪೆಕ್ಟರ್ ಮಂಜೇಗೌಡ ಹಾಗೂ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ. ಇದು ನಾಗರಿಕ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
‘ಮನೆ ಮನೆಗೆ ಪೊಲೀಸ್’ ಹೆಸರಿನಲ್ಲಿ ಜನರ ಕುಂದುಕೊರತೆ ಅರಿಯಲು ಗೃಹ ಇಲಾಖೆ ಮುಂದಾಗಿದೆ. ಆದರೆ ಈ ಪ್ರಕರಣದಲ್ಲಿ ಜನರನ್ನು ಬೆದರಿಸಲಾಗುತ್ತಿದೆ. ನಾಗರಿಕರ ಮೇಲೆ ದೌರ್ಜನ್ಯ ನಡೆಸಿ, ಜಾತಿ ದಬ್ಬಾಳಿಕೆಯ ಮತ್ತು ನಿರಂಕುಶಪ್ರಭುತ್ವದ ಸಂಕೇತವಾಗಿದೆ. ಈ ಘಟನೆ ಪೊಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿರಾ ಡಿವೈಎಸ್ಪಿ ತಕ್ಷಣ ತನಿಖೆ ನಡೆಸಿ, ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.