ತುಮಕೂರು: ಭಾಷೆಯನ್ನು ಗೌರವಿಸಿದಪ್ರತಿಯೊಬ್ಬರ ಮನಸ್ಸು ವಿಕಸನವಾಗುತ್ತದೆ ಎಂದು ತುಮಕೂರು ವಿ.ವಿಯ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ನಗರದ ವಿ.ವಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕುಮಾರವ್ಯಾಸ ಭಾರತ ಸಂಪುಟಗಳ ಲೋಕಾರ್ಪಣೆ ಮತ್ತು ಗಜಲ್ ಧ್ಯಾನ ವಿಚಾರ ಸಂಕಿರಣದಲ್ಲಿ ಮಾತನಾಡಿ, ಮನಸ್ಸಿನ ಮಾತುಗಳು ಗಜಲ್ ಮೂಲಕ ಹೊರಹೊಮ್ಮುತ್ತವೆ. ಗಜಲ್ ಮನಸ್ಸಿಗೆ ಮುದ ನೀಡುತ್ತವೆ ಎಂದರು.
ಕುಲಸಚಿವ ಪ್ರೊ.ಕೆ. ಶಿವಚಿತ್ತಪ್ಪ, ‘ಗಜಲ್ ಭಕ್ತಿ ಪರಂಪರೆಯ ಭಾಗವಾಗಿದ್ದು, ಜಾತ್ಯತೀತ ಮತ್ತು ಧರ್ಮಾತೀತವಾಗಿದೆ. ಆಧುನಿಕೋತ್ತರ ಗಜಲ್ ನಷ್ಟ ಮತ್ತು ಅಗಲಿಕೆಯ ನಡುವೆಯೂ ಹುಟ್ಟುತ್ತದೆ. ಈ ಮೂಲಕ ಕಾವ್ಯಾತ್ಮಕವನ್ನು ಅರ್ಥೈಸಿಕೊಳ್ಳಬಹುದು’ ಎಂದು ಹೇಳಿದರು.
ಕನ್ನಡ ಮತ್ತು ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ, ‘ಇತ್ತೀಚೆಗೆ ಗಜಲ್ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಒಂದಾಗಿ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿದೆ ಎನ್ನುವಷ್ಟರ ಮಟ್ಟಿಗೆ ಕಾವ್ಯಗಳು ರಚನೆಯಾಗುತ್ತಿವೆ. ಗಜಲ್ ಕಾವ್ಯ ಪ್ರಕಾರ ಕನ್ನಡದಲ್ಲಿ ಮತ್ತಷ್ಟು ಸಮೃದ್ಧವಾಗಿ ಬೆಳೆಯಲಿ, ಮಧುರ ಭಾವನೆಗಳು ಹೆಚ್ಚಾಗಲಿ. ವಿ.ವಿಯ ಅಂತರ್ಜಾಲದಲ್ಲಿ ಕುಮಾರವ್ಯಾಸರ ಲೇಖನ ಹಾಗೂ ಪುಸ್ತಕದ ಕುರಿತ ಮಾಹಿತಿ ದೊರೆಯುವಂತಾಗಬೇಕು’ ಎಂದು ತಿಳಿಸಿದರು.
ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಪಿ.ಎಂ ಗಂಗಾಧರಯ್ಯ, ಡಿವಿಜಿ ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ವಿ.ವಿಯ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಹಿರೇಂದ್ರ ಷಾ, ಪ್ರೊ.ಬಿ. ನಿತ್ಯಾನಂದ ಶೆಟ್ಟಿ ಹಾಜರಿದ್ದರು.
ಕನ್ನಡ ಗಜಲ್ ಹೆಜ್ಜೆ ಗುರುತು ಮತ್ತು ಮನಸ್ಸು ಬೆಚ್ಚಗಾಗಿಸುವ ಕನ್ನಡ ಶಾಯಿರಿಗಳ ಕುರಿತು ಗೋಷ್ಠಿ ನಡೆಯಿತು. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕನಕಗಿರಿಯ ಅಲ್ಲಾಗಿರಿರಾಜ್, ಅಬ್ದುಲ್ ಹೈ ತೋರಣಗಲ್ಲು, ನೂರ್ ಅಹ್ಮದ್ ನಾಗನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.