ತುಮಕೂರು: ಅನುಭವದಿಂದ ಉತ್ತಮ ಜ್ಞಾನ ದೊರೆಯುತ್ತದೆ. ಅಧ್ಯಯನದಿಂದ ಸಿಗುವ ಜ್ಞಾನ ಬರೀ ಕೆಲಸಕ್ಕೆ ಸೀಮಿತ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಭಿಪ್ರಾಯಪಟ್ಟರು.
ವಿ.ವಿಯಲ್ಲಿ ಮಂಗಳವಾರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಎಂಕಾಂ (ಮಾಹಿತಿ ವ್ಯವಸ್ಥೆ) ವಿಭಾಗದಿಂದ ಹಮ್ಮಿಕೊಂಡಿದ್ದ ‘ಐಸಿರಿ-2025’ ಉತ್ಸವದಲ್ಲಿ ಮಾತನಾಡಿದರು.
ಮನಸ್ಸಿನಲ್ಲಿ ಒಳ್ಳೆಯ ವಿಚಾರ ಇಟ್ಟುಕೊಂಡು ಸಾಧನೆಗೆ ಪೂರಕವಾದ ಅಧ್ಯಯನ ನಡೆಸಬೇಕು. ಸಮಯ, ಪರೀಕ್ಷೆ ನೋಡಿ ಓದುವುದರಿಂದ ಯಶಸ್ಸು ದೊರೆಯುವುದಿಲ್ಲ. ಪ್ರತಿ ದಿನ ಹೊಸ ವಿಷಯ ಕಲಿಕೆ, ಉತ್ತಮ ಕೆಲಸ ಮಾಡುವುದರಿಂದ ಯಶಸ್ಸು ಸಾಧ್ಯವಾಗಲಿದೆ. ಜೀವನದಲ್ಲಿ ಸಾಧನೆ, ಸಂತೋಷ, ಸಾರ್ಥಕತೆ ಎಂಬ ಮೂರು ತತ್ವ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ವಿದ್ಯಾರ್ಥಿಗಳು ವಿಭಿನ್ನ ರೀತಿಯ ಸಂಶೋಧನೆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದರು.
ವಿ.ವಿ ಕುಲಸಚಿವೆ ನಾಹಿದಾ ಜಮ್ ಜಮ್, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪಿ.ಪರಮಶಿವಯ್ಯ, ಬಿ.ಶೇಖರ್, ಜಿ.ಸುದರ್ಶನರೆಡ್ಡಿ, ಎಂಕಾಂ ವಿಭಾಗದ ಸಂಯೋಜಕ ಬಿ.ಕೆ.ಸುರೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.