ತುಮಕೂರು: ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿಯೇ ಯುವ ತಲೆಮಾರಿಗೆ ಯಕ್ಷಗಾನ ಕಲಿಸಿ ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸಲಹೆ ನೀಡಿದರು.
ಎಸ್.ಎಸ್.ಪುರಂನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷದೀವಿಗೆ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡವನ್ನು ಸಮೃದ್ಧ ಭಾಷೆಯನ್ನಾಗಿಸುವುದರಲ್ಲಿ ಯಕ್ಷಗಾನದ ಕೊಡುಗೆ ಇದೆ. ಹೊಸ ತಲೆಮಾರು ಮೊಬೈಲ್ ಮಾಯೆಯಲ್ಲಿ ಮುಳುಗಿದೆ. ಅವರ ಹಿರಿಯರು ಧಾರಾವಾಹಿಗಳಲ್ಲಿ ಕಳೆದು ಹೋಗಿದ್ದಾರೆ ಎಂದರು.
ಯಕ್ಷಗಾನದಂತಹ ಕಲೆಗಳಲ್ಲಿ ಮಕ್ಕಳು ಆಸಕ್ತಿ ವಹಿಸುವಂತೆ ಮಾಡುವುದೇ ಇದಕ್ಕಿರುವ ಪರಿಹಾರ. ಯಕ್ಷಗಾನವನ್ನು ಅಭ್ಯಾಸ ಮಾಡುವುದರಿಂದ ಭಾಷೆ, ಭಾವ ಪರಿಷ್ಕರಣೆ ಆಗುತ್ತದೆ. ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು.
’ಅತಿಕಾಯ ಕಾಳಗ’ ಎಂಬ ಬೋಧಪ್ರದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲಾಯಿತು.
ಸಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ನಾಯಕ್ ಆಜೇರು, ಚೆಂಡೆ ವಾದಕರಾಗಿ ಪಿ.ಜಿ. ಜಗನ್ನಿವಾಸರಾವ್ ಪುತ್ತೂರು, ಮದ್ದಳೆವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳ ಕಲಾವಿದರಾಗಿ ಮುರಳಿ ಭಟ್ ಬಾಯಾಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್ (ಅತಿಕಾಯ), ಶಶಾಂಕ ಅರ್ನಾಡಿ (ರಾವಣ ಮತ್ತು ವಿಭಿಷಣ), ಆರತಿ ಪಟ್ರಮೆ (ರಾಮ) ಹಾಗೂ ಸಿಬಂತಿ ಪದ್ಮನಾಭ (ಲಕ್ಷ್ಮಣ) ಇದ್ದರು. ಜ್ಞಾನಬುತ್ತಿ ಸತ್ಸಂಗದ ಕೃಷ್ಣಮೂರ್ತಿ, ಕಲಾವಿದರನ್ನು ಗೌರವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.