ADVERTISEMENT

ಸರ್ಕಾರದ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:01 IST
Last Updated 27 ಅಕ್ಟೋಬರ್ 2020, 4:01 IST

ಶಿರಾ: ಬರಪೀಡಿತ ಶಿರಾ ತಾಲ್ಲೂಕನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಘೋಷಣೆ ಮಾಡಿರುವ ಅಂತರ್ಜಲ ದುರ್ಬಳಕೆ ಪಟ್ಟಿಯಿಂದ ಕೈಬಿಟ್ಟಿರುವುದನ್ನು ರಾಜ್ಯ ರೈತ ಸಂಘದ ಶಿರಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಖಂಡಿಸಿದ್ದಾರೆ.

ಅಂತರ್ಜಲದ ದುರ್ಬಳಕೆ ತಪ್ಪಿಸಲು ಸರ್ಕಾರ 45 ತಾಲ್ಲೂಕುಗಳನ್ನು ಆಯ್ಕೆ ಮಾಡಿದೆ. ಆದರೆ, ಸತತ ಬರಪೀಡಿತ ಪ್ರದೇಶಗಳಾದ ಪಾವಗಡ ಮತ್ತು ಶಿರಾ ತಾಲ್ಲೂಕನ್ನು ಕೈ ಬಿಟ್ಟಿರುವುದು ಸರಿಯಲ್ಲ. ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಕುಸಿದಿದೆ. 1200 ಅಡಿವರೆಗೆ ಕೊಳವೆಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಪರಿಸ್ಥಿತಿ ಈ ರೀತಿ ಇರಬೇಕಾದರೆ ಶಿರಾ ಹಾಗೂ ಪಾವಗಡ ತಾಲ್ಲೂಕನ್ನು ಯಾವ ಮಾನದಂಡದ ಮೇಲೆ ಕೈಬಿಡಲಾಗಿದೆ ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದಿದ್ದಾರೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಈ ಹೇಳಿಕೆ ಕೇವಲ ಚುನಾವಣೆ ಪ್ರಚಾರಕ್ಕೆ ಸೀಮಿತವಾಗಲಿದೆ. ಈಗ ಪಟ್ಟಿಯಿಂದ ಕೈ ಬಿಡುವ ಮೂಲಕ ಬಿಜೆಪಿ ಸರ್ಕಾರ ದ್ವಂದ್ವ ನಿಲುವು ತಾಳುತ್ತಿದೆ. ಇವರಿಗೆ ನಿಜವಾಗಲೂ ಶಿರಾ ತಾಲ್ಲೂಕಿನ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಕರ್ನಾಟಕ ಪ್ರಾಧಿಕಾರ ಘೋಷಣೆ ಮಾಡಿರುವ ಪಟ್ಟಿಗೆ ಸೇರಿಸಿ ಅಂತರ್ಜಲ ಬಳಕೆಯ ದುರ್ಬಳಕೆಯನ್ನು ತಪ್ಪಿಸಬೇಕು ಎಂದು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.