ADVERTISEMENT

ಶ್ರೀನಿವಾಸ್‌ ಜೆಡಿಎಸ್‌ಗೆ ಏಕೆ ಬರಬಾರದು?: ಶಾಸಕ ಸಾ.ರಾ.ಮಹೇಶ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:43 IST
Last Updated 9 ನವೆಂಬರ್ 2022, 7:43 IST
   

ತುಮಕೂರು: ಜೆಡಿಎಸ್ ಉಚ್ಛಾಟಿತ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತೆ ಪಕ್ಷಕ್ಕೆ ಏಕೆ ಬರಬಾರದು? ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾರ್ಮಿಕವಾಗಿ ಪ್ರಶ್ನಿಸಿದರು.

ಸಭೆಯೊಂದರಲ್ಲಿ ಮಂಗಳವಾರ ಭಾಗವಹಿಸಿದ ನಂತರ ನಗರದಲ್ಲಿರುವ ಶ್ರೀನಿವಾಸ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜೆಡಿಎಸ್‌ನಲ್ಲಿ ಇರೋದು ಶ್ರೀನಿವಾಸ್‌ ಅವರಿಗೂ ಅನಿವಾರ್ಯ. ನಮ್ಮ ಪಕ್ಷಕ್ಕೂ ಅವರು ಅನಿವಾರ್ಯ. ಪಕ್ಷ ಬಿಟ್ಟು ಹೋದರೆ ಇಬ್ಬರಿಗೂ ನಷ್ಟ. ಎಲ್ಲವನ್ನೂ ನಮ್ಮ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ’ ಎಂದು
ಹೇಳಿದರು.

ADVERTISEMENT

‘ರಾಜಕಾರಣದಲ್ಲಿ ಏನೆಲ್ಲ ಬೆಳವಣಿಗೆಗಳು ಆಗಿಲ್ಲ. ಜಿ.ಟಿ.ದೇವೇಗೌಡ ಹಾಗೂ ನನಗೂ ಆಗೋದೇ ಇಲ್ಲ ಎಂದು ಹೇಳಿದರು. ಈಗ ಅವರ ಜತೆಗೆ ಚೆನ್ನಾಗಿಯೇ ಇದ್ದೇನೆ. ಹಾಗಾಗಿ ಶ್ರೀನಿವಾಸ್ ಮತ್ತೆ ಪಕ್ಷಕ್ಕೆ ಬರುವುದರಲ್ಲಿ ತಪ್ಪೇನಿದೆ?’
ಎಂದರು.

ಭೇಟಿ ಸಮಯದಲ್ಲಿ ರಾಜಕೀಯ ಚರ್ಚೆಗಳು ನಡೆದಿವೆ? ಪಕ್ಷಕ್ಕೆ ಆಹ್ವಾನ ನೀಡಿದ್ದೀರಾ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ. ತುಮಕೂರಿಗೆ ಭೇಟಿ ನೀಡಿದ ಸಮಯದಲ್ಲಿ ಶ್ರೀನಿವಾಸ್ ಮನೆಗೆ ಹೋಗುತ್ತೇನೆ. ಕೆಲವು ವಿಚಾರಗಳು ಚರ್ಚೆಯಾಗಿವೆ ಎಂದು ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶ್ರೀನಿವಾಸ್ ಜತೆಗೆ ಪ್ರತ್ಯೇಕವಾಗಿ ಚರ್ಚಿಸಿದರು. ಮನೆಯಲ್ಲಿ ಶ್ರೀನಿವಾಸ್ ಪತ್ನಿ ಹಾಗೂ ಪುತ್ರನ ಜತೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.