ADVERTISEMENT

ಕುಂದಾಪುರ: ವಿಶ್ವ ಏಡ್ಸ್‌ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:23 IST
Last Updated 4 ಡಿಸೆಂಬರ್ 2013, 6:23 IST

ಕುಂದಾಪುರ: ಎಚ್‌ಐವಿ ಸೊಂಕು ಹೊಂದಿದವರ ಮೇಲೆ ಅನುಕಂಪ ತೋರಿಸುವ ಬದಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು. ಬದುಕಿನ ಬಗ್ಗೆ ವಿಶ್ವಾಸ ಮೂಡಿಸಿ ಹೊಸ ಜೀವನೋತ್ಸಾಹ ತುಂಬುವುದರಿಂದ ಎಚ್‌ಐವಿ ಪೀಡಿತರ ಮುಂದಿನ ಬದುಕು ಉಲ್ಲಾಸಗೊಳ್ಳಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್‌ ಹೇಳಿದರು.

ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಯವರ ಕಾರ್ಯಾಲಯ, ಭಂಡಾರ್‌ಕಾರ್ಸ ಕಾಲೇಜು ರಾಷ್ಟೀಯ ಸೇವಾ ಯೋಜನೆ ಘಟಕ  ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಶಾಖೆಯ ಸಂಯುಕ್ತ ಆಶ್ರಯದಲ್ಲಿ ‘ಎಚ್‌ಐವಿ ಗೆ ಸೊನ್ನೆ ತನ್ನಿ’ ಎನ್ನುವ ಘೋಷ ವಾಕ್ಯದೊಂದಿಗೆ ನಡೆದ ವಿಶ್ವ ಏಡ್ಸ್‌ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಏಡ್ಸ್‌ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಕೊಳ್ಳಬೇಕು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕದ ಡಾ.ಎಚ್‌.ಅಶೋಕ್ ಮಾತನಾಡಿ, ದೇಶದಲ್ಲಿ ಹಿರಿಯರ ಜನಸಂಖ್ಯೆಯಲ್ಲಿ 0.51­ರಷ್ಟಿದ್ದ ಏಡ್ಸ್ ಬಾಧಿತರ ಸಂಖ್ಯೆ ಇದೀಗ ಬಹಳಷ್ಟು ಕಡಿಮೆಯಾಗಿದೆ. ತಾಯಿಯಿಂದ ಮಗುವಿಗೆ ಬರುವ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಯುವ ಜನತೆಯಲ್ಲಿ ಇದರ ಪರಿಣಾಮ ಏರುತ್ತಿ­ರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.

ಕುಂದಾಪುರ ಪುರಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್.ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಜಿ.ಪಂ. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್, ಕುಂದಾಪುರ ಉಪವಿಭಾಗಾಧಿಕಾರಿ ಎಸ್.ಯೋಗೀಶ್ವರ್, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಪಿ ನಾರಾಯಣ ಶೆಟ್ಟಿ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಜಿ.ಎಂ.­ಗೊಂಡ, ಭಾರತೀಯ ರೆಡ್‌ಕ್ರಾಸ್ ಕುಂದಾಪುರ ಶಾಖೆಯ ಅಧ್ಯಕ್ಷ ಜಯಕರ ಶೆಟ್ಟಿ, ಭಂಡಾರ್‌­ಕಾರ್ಸ್‌ ಕಾಲೇಜಿನ ಯೂತ್ ರೆಡ್ ಕ್ರಾಸ್‌ನ ಸಂಯೋಜಕ ಸತ್ಯನಾರಾಯಣ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಎಚ್‌ಐವಿ ನಿಯಂತ್ರಣ ಮಾಹಿತಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಸ್ವಾಗತಿಸಿದರು, ಉಪನ್ಯಾಸಕಿ ಸುಮಲತಾ ನಿರೂಪಿಸಿದರು.

ಮಂಗಳವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಏಡ್ಸ್ ಬಾಧಿತರ ಸಂಕಷ್ಟಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ದೊರಕದೆ ಇರುವ ಕುರಿತು ಎಚ್‌ಐವಿ ಕಾರ್ಯಕರ್ತ ಸಂಜೀವ ವಂಡ್ಸೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ನಡೆದ 2 ಪೂರ್ವ­ಭಾವಿ ಸಭೆಯಲ್ಲಿ ಒಬ್ಬರಿಗಾದರೂ ಏಡ್ಸ್ ಬಾಧಿತರ ಸಂಕಷ್ಟಗಳನ್ನು ಹೇಳಿಕೊಳ್ಳಲು ಅವ­ಕಾಶ ನೀಡಿ ಎಂದು ವಿನಂತಿಸಿದ್ದರೂ, ಬೇಡಿಕೆ­ಯನ್ನು ಕಡೆಗಣಿಸಲಾಗಿದೆ ಎಂದು ಅವರು ಪತ್ರಕರ್ತರೊಂದಿಗೆ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.