ಹಟ್ಟಿಯಂಗಡಿ (ಬೈಂದೂರು): ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಲಿತ ವರ್ಗಕ್ಕೆ ಸಿಗಬೇಕಾದ ಸೌಲಭ್ಯ ನೀಡುವಲ್ಲಿ ನಿಧಾನ ಕ್ರಮ ಅನುಸರಿಸುತ್ತಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಹಾಗೂ ಕೆಂಚನೂರು ಗ್ರಾಮ ಶಾಖೆ ಆಶ್ರಯದಲ್ಲಿ ದಲಿತ ಸದಸ್ಯರು ಗ್ರಾಮ ಪಂಚಾಯಿತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರ ಆಶ್ರಯ, ಅಂಬೇಡ್ಕರ್ ವಸತಿ ಯೋಜನೆಗಳ ಬಿಲ್ ಮತ್ತು ಗ್ರಾಮ ಪಂಚಾಯಿತಿಯ ಪರಿಶಿಷ್ಟರ ಮೀಸಲು ನಿಧಿಯ ಹಣವನ್ನು ಸಕಾಲದಲ್ಲಿ ಪಾವತಿಸುವುದಿಲ್ಲ; ಕೆಲಸ ಮುಗಿದಿದ್ದರೂ ನಿಧಾನ ಕ್ರಮ ಅನುಸರಿಸಿ ಸತಾಯಿಸುತ್ತಾರೆ ಎಂದು ದೂರಿದ ಪ್ರತಿಭಟನಾನಿರತರು ಅವರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಈ ಕುರಿತಾದ ಮನವಿಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗೆ ಸಲ್ಲಿಸಿದ್ದಾರೆ.
ಜಿಲ್ಲಾ ಸಂಚಾಲಕ ಕೆ. ನಾರಾಯಣ ರಾವ್, ಎಸ್. ಜಿ. ಗಣೇಶ, ಕುಪ್ಪ, ಶಿವ, ನಾಗ, ನಾರಾಯಣ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.