ADVERTISEMENT

ಪರದಾಡಿದ ಭಕ್ತರು, ವಾಹನವೇ ಆಸರೆ

ಮುಳುಗಿ ಏಳುವ ಕುಮಾರಧಾರ ಸೇತುವೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:04 IST
Last Updated 22 ಜುಲೈ 2013, 10:04 IST

ಸುಬ್ರಹ್ಮಣ್ಯ: ಶನಿವಾರ ರಾತ್ರಿ 10 ಗಂಟೆಗೆ ಮುಳುಗಡೆಗೊಂಡ ಕುಮಾರಧಾರ ಸೇತುವೆ ಭಾನುವಾರ ಬೆಳಿಗ್ಗೆ 11ಗಂಟೆಗೆ ನೀರಿನ ಹರಿವಿನ ಮಟ್ಟ ಇಳಿಕೆಗೊಂಡು ಮತ್ತೆ ವಾಹನ ಸಂಚಾರಕ್ಕೆ ಮುಕ್ತವಾಯಿತು.

ಸುಮಾರು 13 ಗಂಟೆಗಳ ಕಾಲ  ಬೆಂಗಳೂರು, ಹಾಸನ, ಮಂಗಳೂರು, ಧರ್ಮಸ್ಥಳಗಳಿಂದ ಬಂದ ನೂರಾರು ವಾಹನಗಳಿಂದ ಸಾವಿರಾರು ಭಕ್ತರು ಅನ್ನ ನೀರಿಗಾಗಿ ಪರದಾಟ ನಡೆಸಿದರೆ, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಕಾಡನ್ನೆ ಆಶ್ರಯಿಸಿದರು. ವಾಹನದಲ್ಲೇ ಆಸರೆ ಪಡೆದರು.

ಶುಕ್ರವಾರ ಸಂಜೆ ಸೇತುವೆ ಮುಳುಗಿದಾಗ ಶಾಲಾ ವಿದ್ಯಾರ್ಥಿಗಳು ಮನೆ ಸೇರಲಾಗದೆ ಸುಬ್ರಹ್ಮಣ್ಯದಲ್ಲೇ ರಾತ್ರಿ ಕಳೆದರೆ, ಕೆಲವು ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಪಂಜ ಮಾರ್ಗವಾಗಿ ತೆರಳಿ ತಡ ರಾತ್ರಿ ಮನೆ ಸೇರಿದರು.

ಎರಡು ವರ್ಷಗಳ ಹಿಂದೆ 16 ಬಾರಿ ಕುಮಾರಧಾರ ಸೇತುವೆ ಮುಳುಗಡೆಗೊಂಡು ಜನರು ಕಷ್ಟ ಅನುಭವಿಸಿದ್ದನ್ನು ಮಾಧ್ಯಮಗಳು ಹಲವು ಬಾರಿ ಎಚ್ಚರಿಸಿದ್ದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಸೇತುವೆ ಮಾತ್ರ ಮೇಲ್ದರ್ಜೆಗೇರದೆ ಕೂತಿದೆ. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ `ಸೇತುವೆಯನ್ನು ಮೇಲ್ದರ್ಜೆಗೆ ಏರುಸುತ್ತೇವೆ' ಎಂದು ಆಶ್ವಾಸನೆ ಕೊಡುತ್ತಾರೆ ಹೊರತು ಅನುಷ್ಠಾನ ಮಾತ್ರ ಆಗುತ್ತಿಲ್ಲ.

ಬಿಕೋ ಎನ್ನುತ್ತಿರುವ ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದ ಘಟ್ಟ ಪ್ರದೇಶ ಹಾಗೂ ಕುಮಾರ ಪರ್ವತದಲ್ಲಿ ನಿರಂತರ ಮಳೆ ಸುರಿದಾಗ ಕುಮಾರಧಾರ ನದಿಯ ಸೇತುವೆ ಮಳುಗಡೆಯಾಗುವುದು. ಈ ಸುದ್ದಿ ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ಪ್ರಸಾರಗೊಂಡಾಗ ದೂರದ ಯಾತ್ರಿಕರು ದೂರವಾಣಿ ಮೂಲಕ ದೇವಸ್ಥಾನಕ್ಕೆ ಬರಬಹುದೇ? ಸೇತುವೆ  ಮುಳುಗಡೆಯಾಗಿದೆಯೇ? ಎಂದು ವಿಚಾರಿಸುತ್ತಾರೆ. ಮಳೆಗಾಲದ ಈ ಅವಧಿಯಲ್ಲಿ ದೇಗುಲಕ್ಕೆ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ.

ಕುಮಾರಧಾರ ಸೇತುವೆ ಮುಳುಗಿದಾಗ ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ದ್ವೀಪವಾದ ಸುಬ್ರಹ್ಮಣ್ಯ ಎಂದು ಸುದ್ದಿ ಬರುತ್ತದೆ. ನೀರು ಕಡಿಮೆಯಾದಾಗ ಯಾರೂ ಸುದ್ದಿ ಮಾಡುವುದಿಲ್ಲ. ಇದರಿಂದಾಗಿ ಕಳೆದ 2 ತಿಂಗಳಿಂದ ಯಾತ್ರಿಕರು ಬಾರದೆ ವ್ಯಾಪಾರವಿಲ್ಲದೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ.
 -ವೆಂಕಟೇಶ್.ಎಚ್.ಎ.   ಹಣ್ಣುಕಾಯಿ ವ್ಯಾಪಾರಿ

ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನಿಂದ ನಮ್ಮ ವಾಹನದಲ್ಲಿ ಕುಟುಂಬ ಸಮೇತರಾಗಿ ಗುಂಡ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬಂದಾಗ ಕುಮಾರಧಾರ ಸೇತುವೆ ಮುಳುಗಡೆಗೊಂಡು ಅಲ್ಲೇ ವಾಹನದಲ್ಲಿ ಕಾಲ ಕಳೆಯಬೇಕಾಯಿತು.

ರಾತ್ರಿ 10.30 ಗಂಟೆಗೆ ಬಂದವರು ಅನ್ಯಮಾರ್ಗ ತಿಳಿಯದೆ ಕಾಡಿನ ಮಧ್ಯದಲ್ಲೇ ಗಾಳಿ ಮಳೆಗೆ ವಾಹನದಲ್ಲಿ ಮಲಗಿ ಆಸರೆ ಪಡೆದೆವು. ನಮ್ಮಂತಹ ಹಲವು ಕುಟುಂಬಗಳದ್ದು ಇದೇ ಸ್ಥಿತಿ. ದಯವಿಟ್ಟು ಸೇತುವೆಯನ್ನು ಮೇಲ್ದರ್ಜೆಗೆ ಏರಿಸಿ.                                
-ದೇವಣ್ಣ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT