ಉಡುಪಿ: ‘ನಟನಾಗುವ ಆಸೆ ಮತ್ತು ಕನಸು ಎರಡೂ ಇರಲಿಲ್ಲ. ನಟನಾಗಿದ್ದು ಆಕಸ್ಮಿಕ’ ಎಂದು ರೈಲ್ವೆ ಚಿಲ್ಡ್ರನ್ ಚಲನ ಚಿತ್ರದ ನಟನೆಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿರುವ ಬಾಲನಟ ಕೆ. ಮನೋಹರ್ ಹೇಳಿದರು. ಎಂಜಿಎಂ ಕಾಲೇಜಿನ ಪತ್ರಿಕೋ ದ್ಯಮ ವಿಭಾಗದಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಯಲಹಂಕದ ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆ ನಡೆಯುತ್ತಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ ಅಷ್ಟೇ. ಅದನ್ನು ಬಿಟ್ಟು ನಟನಾಗುವ ಬಗ್ಗೆ ಯೋಚಿಸಿರಲಿಲ್ಲ. ರೈಲ್ವೆ ಚಿಲ್ಡ್ರನ್ ಚಿತ್ರಕ್ಕೆ ನಟರ ಹುಡುಕಾಟ ನಡೆಸಿದ ಚಿತ್ರತಂಡ ಕೊನೆಗೆ ನಮ್ಮ ಶಾಲೆಗೆ ಬಂತು. ಆಡಿಷನ್ ನಡೆಸಿದ ಅವರು ನನ್ನನ್ನು ಆಯ್ಕೆ ಮಾಡಿಕೊಂಡರು ಎಂದು ಹೇಳಿದರು.
ಮೊದಲ ಎರಡು ದಿನ ಕ್ಯಾಮೆರಾ ಮುಂದೆ ನಿಂತಾಗ ಭಯ ಆಗುತ್ತಿತ್ತು. ಕೈ ಕಾಲುಗಳಲ್ಲಿ ನಡುಕ ಇತ್ತು. ಚಿತ್ರ ತಂಡದವರು ಧೈರ್ಯ ಹೇಳಿ ನಟನೆ ಮಾಡುವಂತೆ ಪ್ರೋತ್ಸಾಹ ನೀಡಿದ ಕಾರಣ ಉತ್ತಮವಾಗಿ ಅಭಿನಯಿಸಲು ಸಾಧ್ಯವಾಯಿತು. ಸ್ವಾಭಾವಿಕವಾಗಿ ನಟಿಸುವಂತೆ ಅವರು ಹುರಿದುಂಬಿಸಿದರು. ಚಿಂದಿ ಬಟ್ಟೆ ಧರಿಸಿಕೊಂಡು ನಟಿಸಿದೆ. ಚಿತ್ರ ಉತ್ತಮವಾಗಿ ಮೂಡಿಬಂತು. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಸಹ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿತ್ರಕ್ಕೆ ಒಂದು ಹಾಡನ್ನು ಬರೆದಿ ದ್ದೇನೆ ಮತ್ತು ಅದನ್ನು ಹಾಡಿದ್ದೇನೆ. ಎಂದಿಗೂ ಹಾಡು ಬರೆಯುವೆ ಅಂದು ಕೊಂಡಿರಲಿಲ್ಲ. ಅದು ಸಾಧ್ಯವಾಯಿತು ಎಂದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಸಂಧ್ಯಾ ನಂಬಿಯಾರ್, ಉಪ ನ್ಯಾಸಕ ಮಂಜುನಾಥ ಕಾಮತ್, ಚಿತ್ರತಂಡದ ಕೃಷ್ಣಮೂರ್ತಿ, ಅಜಿತ್ ಇದ್ದರು.
* *
ಮೊದಲು ಕ್ಯಾಮೆರಾ ಎದುರಿಸಿದಾಗ ಕೈ–ಕಾಲು ನಡುಗಿದವು. ಎರಡು ದಿನದ ನಂತರ ಎಲ್ಲವೂ ಸರಿಹೋಯಿತು.
ಕೆ. ಮನೋಹರ್,
ಬಾಲನಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.