ADVERTISEMENT

ಬದುಕು ಬದಲಿಸುವ ತರಬೇತಿ: ಉಪೇಂದ್ರ ನಾಯಕ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 8:26 IST
Last Updated 5 ಜುಲೈ 2013, 8:26 IST

ಬ್ರಹ್ಮಾವರ: ಕೊರಗ ಸಮುದಾಯದ ಯುವಕ, ಯುವತಿಯರು ಅನೇಕ ಮಾಹಿತಿಗಳ ಕೊರತೆಯಿಂದ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬಂದು ವಿವಿಧ ಸ್ವ-ಉದ್ಯೋಗ ತರಬೇತಿ ಪಡೆದು ಬದುಕಿನಲ್ಲಿ ಮುಂದೆ ಬರಬೇಕೆಂದು ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಅಭಿಪ್ರಾಯಪಟ್ಟರು.

ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ರುಡ್‌ಸೆಟ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊರಗ ಸಂಘಟನೆಗಳ ಸಹಕಾರದೊಂದಿಗೆ ನಡೆದ ಕೊರಗ ಯುವಕ, ಯುವತಿಯರಿಗೆ ನಡೆದ ವಿವಿಧ ಸ್ವ-ಉದ್ಯೋಗ ತರಬೇತಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಪ್ರಭಾಕರ  ಶರ್ಮಾ ಮಾತನಾಡಿ ಈ ತರಬೇತಿಯಿಂದ ಉತ್ತಮ ರೀತಿಯಲ್ಲಿ ಸ್ವ-ಉದ್ಯೋಗ ಮಾಡುವ ಮೂಲಕ ಸ್ವಾವಲಂಬಿ ಬದುಕು ನಡೆಸಬಹುದೆಂದು ಕಿವಿ ಮಾತು ಹೇಳಿದರು.

ಉಡುಪಿ ತಾ.ಪಂ. ಸದಸ್ಯೆ ವೆರೋನಿಕ ಕರ್ನೆಲಿಯೋ ಮಾತನಾಡಿ, ಕೊರಗ ಸಮುದಾಯ ಸಬಲವಾಗಲು ಅವರ ವ್ಯಕ್ತಿತ್ವ ಪ್ರಗತಿಯಾಗಲು ತರಬೇತಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ವಿಜಯಕುಮಾರ್ ಡಿ.ನೇರ್ಲೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪಾಂಡುರಂಗ ಸ್ವಾಗತಿಸಿದರು. ಮಧುಕರ ಎಸ್. ವಂದಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.