ADVERTISEMENT

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಮಾವೇಶ ಮಾ. 5ರಂದು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:30 IST
Last Updated 18 ಫೆಬ್ರುವರಿ 2011, 9:30 IST

 ಕಾರ್ಕಳ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಮಾರ್ಚ್ 5ರಂದು ಇಲ್ಲಿನ ಸಾಲ್ಮರದ ಗ್ಯಾಲಕ್ಸಿ ಸಭಾಭವನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆರೀಫ್ ಕಲ್ಲೊಟ್ಟೆ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ಈ ಹಿಂದಿನ ಬಜೆಟ್‌ನಲ್ಲಿ 256ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಕಾರ್ಕಳ ಕ್ಷೇತ್ರದಲ್ಲಿ ಸೂಕ್ಷ್ಮ ಸ್ವಸಹಾಯ ಗುಂಪಿನ ಮೂಲಕ 400 ಅಲ್ಪಸಂಖ್ಯಾತ ಮಹಿಳೆಯರಿಗೆ 2,500 ರೂಪಾಯಿ ಸಹಾಯಧನ ವಿತರಿಸಲಾಗಿದೆ. ಶ್ರಮಶಕ್ತಿ ಮೂಲಕ ನೂರಾರು ಮಂದಿಗೆ ಶೇ 25ರ ಸಹಾಯಧನದೊಂದಿಗೆ 15 ಸಾವಿರ ರೂಪಾಯಿಯಂತೆ ಸಾಲ ವಿತರಿಸಲಾಗಿದೆ ಎಂದರು.

ಬಜೆಟ್‌ನಲ್ಲಿ ಬಡ ಅಲ್ಪಸಂಖ್ಯಾತರಿಗೆ ಜಾಗ ಖರೀದಿಸಲು ಕಡಿಮೆ ಬಡ್ಡಿ ದರದಲ್ಲಿ ರೂ1.ಲಕ್ಷ ಮತ್ತು ಮನೆಕಟ್ಟಲು ಶೇ 4ರ ಬಡ್ಡಿದರದಲ್ಲಿ ರೂ 4ಲಕ್ಷವನ್ನು ಮನೆ ನಿರ್ಮಾಣಕ್ಕೆ ನೀಡಲು ಯೋಜಿಸಲಾಗಿದೆ. ಈ ಯೋಜನೆಯನ್ನು ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಯೋಜನೆಗೆ ಮುಖ್ಯಮಂತ್ರಿ ಅನುಮೋದನೆ ನೀಡುವ ಭರವಸೆ ಇದೆ. ಇದರ ಸಂಪೂರ್ಣ ಲಾಭವನ್ನು ಅಲ್ಪಸಂಖ್ಯಾತರು ಪಡೆಯಬೇಕು ಎಂದರು.

ಸಮಾವೇಶದಲ್ಲಿ ಸುಮಾರು 2 ಸಾವಿರ ಜನರು ಭಾಗವಹಿಸಲಿದ್ದು ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಮಮ್ತಾಜ್ ಅಲೀಖಾನ್ ಉದ್ಘಾಟಿಸುವರು. ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೌರಿಸ್ ಮೆಂಡೋನ್ಸಾ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್, ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಇರುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೋರ್ಚಾದ ಕ್ಷೇತ್ರಾಧ್ಯಕ್ಷ ಮೌರಿಸ್ ಮೆಂಡೋನ್ಸಾ, ಕಾರ್ಯದರ್ಶಿ ಮಹಮ್ಮದ್ ಮೀರ್, ಜಿಲ್ಲಾ ಕಾರ್ಯದರ್ಶಿ ಜೋಹರಾ ಕುಕ್ಕುಂದೂರು, ಹಸೈನಾರ್ ಬೈಲೂರು, ಮಹಮ್ಮದ್ ಜರಿಗುಡ್ಡೆ, ಇಜಾಸ್ ಶರೀಫ್, ಜೀನತ್, ಫಾತಿಮಾ, ಮುಸ್ತಾಕ್ ಬಂಗ್ಲೆಗುಡ್ಡೆ, ಐವನ್ ಜೋಡುಕಟ್ಟೆ, ಮಹಮ್ಮದ್ ಶಿರ್ಲಾಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.