ADVERTISEMENT

ಬಿಜೆಪಿ ಮಾಡಿದ್ದನ್ನು 100 ವರ್ಷದ್ಲ್ಲಲೂ ಮಾಡೆವು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 9:55 IST
Last Updated 5 ಮಾರ್ಚ್ 2012, 9:55 IST

ಉಡುಪಿ: `ಮಾತು ಮಾತಿಗೆ ಬಿಜೆಪಿಯವರು ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡದೇ ಇದ್ದಿದ್ದನ್ನು ನಾವು ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಮಾಡಿದೆ ತೋರಿಸಿದೆವು ಎನ್ನುತ್ತಿದ್ದಾರೆ. ನಿಜ, ಅವರು ಮಾಡಿದ ಕೆಲಸವನ್ನು ನಾವು  100 ವರ್ಷ ಕಳೆದರೂ ಖಂಡಿತಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ~ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಇಲ್ಲಿ ಲೇವಡಿ ಮಾಡಿದರು.

 ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಪ್ರಚಾರಾರ್ಥ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ  ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ ಬಡವರಿಗೆ ಅನುಕೂಲ ಮಾಡಿಕೊಡುವ ಕೆಲಸ ಆಗಬೇಕು. ಸರ್ಕಾರದ ಸವಲತ್ತುಗಳು ಜನರಿಗೆ ತಲುಪಬೇಕು. ಇಂತಹ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಚುನಾವಣೆ ಎದುರಿಸಬೇಕು, ಕಾಂಗ್ರೆಸ್ ಸರ್ಕಾರ ಕಳೆದ 60 ವರ್ಷಗಳಲ್ಲಿ ಏನು ಮಾಡಿದೆ? ಎಂದು ಕೇಳುವವರಿಗೆ ಕೇಂದ್ರ ಸರ್ಕಾರ ಮಾಡಿಕೊಟ್ಟ ಸವಲತ್ತುಗಳ ಬಗ್ಗೆ ತಿಳಿಸಿ ಹೇಳಬೇಕು~ ಎಂದರು.

`ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಇತಿಹಾಸವಿದೆ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ ಅವರಿಂದ ಪ್ರಾರಂಭವಾಗಿ ನೆಹರೂ, ಇಂದಿರಾಜಿ, ರಾಜೀವ ಗಾಂಧಿ, ಸೋನಿಯಾ ನಾಯಕತ್ವದಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷ ರಾಷ್ಟ್ರದ ಪ್ರಗತಿಗೆ ತನ್ನ ಕೊಡುಗೆ ಸಲ್ಲಿಸುತ್ತ ಬಂದಿದೆ.

ರಾಷ್ಟ್ರವನ್ನು ಹಸಿವಿನಿಂದ ಪಾರುಗೊಳಿಸುವ ಹಸಿರುಕ್ರಾಂತಿ ಇರಬಹುದು, ಕಾನೂನು, ಶಿಕ್ಷಣದ ನೆರವು, ಬಡತನ ನಿರ್ಮೂನಲ ಹೀಗೆ ಹತ್ತಾರು ಕಾರ್ಯಕ್ರಮ ರೂಪಿಸಿದ್ದು ಕಾಂಗ್ರೆಸ್~ ಎಂದರು.

 ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಮಾತನಾಡಿ, `ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಬಹಳಹಿಂದಿದೆ. ಮೂರುವರೆ ವರ್ಷಗಳಲ್ಲಿ ತೀವ್ರ ಭ್ರಷ್ಟಾಚಾರ, ಸ್ವಜಪಕ್ಷಪಾತ, ಗಣಿಹಗರಣ, ಭೂಹಗರಣ ಸೇರಿದಂತೆ ಹತ್ತಾರು ಹಗರಣಗಳಲ್ಲಿ ಸಿಲುಕಿದೆ. ಈ ಕುರಿತಾದ ಭಿತ್ತಿಪತ್ರವನ್ನು ಮತದಾರರಿಗೆ ಹಂಚಲಾಗುವುದು~ ಎಂದರು.

ಎಐಸಿಸಿ ಕಾರ್ಯದರ್ಶಿ ವೇದ ಪ್ರಕಾಶ್ ಮಾತನಾಡಿ, `ಉಡುಪಿ-ಚಿಕ್ಕಮಗಳೂರು ಚುನಾವಣೆ ಪ್ರತಿಷ್ಠೆಯ ಕಣ.  ಮುಂದಿನ 15 ದಿನಗಳ ಕಾಲ ನಾವು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು.

ಬಿಜೆಪಿ ಸರ್ಕಾರ ಹೇಳುವುದು ಒಂದು ಮಾಡುವುದು ಇನ್ನೊಂದು ಹೀಗಾಗಿ ಆ ಸರ್ಕಾರದ ಚುನಾವಣೆ ಭರವಸೆಗಳ ಮೇಲೆ ಯಾರೂ ನಂಬಿಕೆ ಇಡುವುದು ಬೇಡ. ಹೀಗಾಗಿ ಈ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾನೂನು ಘಟಕದ ಪ್ರಜ್ಞಾವಂತ ಮತದಾರರು ಶ್ರಮಿಸಬೇಕು~ ಎಂದರು.

ಈ ಕಾರ್ಯಕ್ರಮದ ಬಳಿಕ ಆಸ್ಕರ್ ಫರ್ನಾಂಡಿಸ್ ಸಾಂಕೇತಿಕವಾಗಿ ಚುನಾವಣಾ ಮತಯಾಚನೆಯ ಪಾದಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮ ಸಂಯೋಜಕ ಎ.ಜಿ.ಶಿವಣ್ಣ, ಮುಖಂಡರಾದ ಕೆ.ಪಿ.ನಂಜುಂಡಿ, ಪ್ರಕಾಶ್ ಶೆಟ್ಟಿ, ಅಮೆರಿಕ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಗ್ ಗಿಲ್‌ಜಾನಿ, ಬ್ಲಾಸಂ ಫರ್ನಾಂಡಿಸ್, ಶ್ಯಾಮಲಾ ಬಂಡಾರಿ, ರಂಜಿತ್ ಥಾಮಸ್, ಸಂಕೇತ್ ಶೆಟ್ಟಿ, ಎಂ.ಎ.ಗಫೂರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.