ADVERTISEMENT

ರಸ್ತೆ ಸಮಸ್ಯೆ ಮುಕ್ತಿಗೆ ನಮ್ಮಮತ...!

ಯಡಮೊಗೆ, ಕಮಲಶಿಲೆ ರಸ್ತೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 8:36 IST
Last Updated 21 ಏಪ್ರಿಲ್ 2013, 8:36 IST
ಯಡಮೊಗೆ ಕಮಲಶಿಲೆ ರಸ್ತೆಯ 8ಕಿಮೀ ಉದ್ದದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. 				                ಸಿದ್ದಾಪುರ ಚಿತ್ರ
ಯಡಮೊಗೆ ಕಮಲಶಿಲೆ ರಸ್ತೆಯ 8ಕಿಮೀ ಉದ್ದದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಿದ್ದಾಪುರ ಚಿತ್ರ   

ಸಿದ್ದಾಪುರ: ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗ್ರಾಮೀಣ ಜನರು ತಮ್ಮೂರಿನ ಪ್ರಮುಖ ಸಮಸ್ಯೆಗಳತ್ತ ಬೊಟ್ಟು ಮಾಡುತ್ತಿದ್ದು, ಹೊಸಂಗಡಿ ಗ್ರಾಮ ಪಂಚಾಯಿತಿ ಯಡಮೊಗೆ ಗ್ರಾಮದ ಜನತೆ ತಮ್ಮೂರಿನ ಸಂಪರ್ಕ ರಸ್ತೆ ಸಮಸ್ಯೆಗಳನ್ನು ಸರಿಪಡಿಸುವ ಜನಪ್ರತಿನಿಧಿಗೆ ಮತ ನೀಡುವುದಾಗಿ ಹೇಳುತ್ತಿದ್ದಾರೆ.

ಯಡಮೊಗೆ ರಸ್ತೆ ಸಮಸ್ಯೆ: ಕುಂದಾಪುರ ತಾಲ್ಲೂಕಿನ ತುತ್ತತುದಿಯ ಯಡಮೊಗೆ ಗ್ರಾಮವು ಭೌಗೋಳಿಕವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು, ನಕ್ಸಲ್ ಪೀಡಿತ ಪ್ರದೇಶವೆಂದು ಹಣೆಪಟ್ಟಿ ಹೊಂದಿದೆ. ಕುಂದಾಪುರ, ಶಿವಮೊಗ್ಗ ರಾಜ್ಯ ಹೆದ್ದಾರಿಯ ಎಡಭಾಗದಲ್ಲಿರುವ ಈ ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆಯಿದೆ. ಯಡಮೊಗೆ ಮೂಲಕ ಸಮೀಪದ ಕಮಲಶಿಲೆ ಸಂಪರ್ಕ ರಸ್ತೆಯು ಬಹುಕಾಲದ ಬೇಡಿಕೆಯಾಗಿದ್ದು, ಇದಕ್ಕೆ ಸ್ಪಂದಿಸಿದ ಅಂದಿನ ಬೈಂದೂರು ಶಾಸಕ ಗೋಪಾಲ ಪೂಜಾರಿ 2006ರಲ್ಲಿ ಕೊಚ್ಚಾಡಿ ಎಂಬಲ್ಲಿ ಕುಬ್ಜಾ ನದಿಗೆ ಸೇತುವೆಯನ್ನು ನಿರ್ಮಿಸಿ ಯಡಮೊಗೆ ಕಮಲಶಿಲೆ 8ಕಿಮೀ ಮಣ್ಣಿನ ರಸ್ತೆಯನ್ನು ಡಾಂಬರು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿತ್ತು. ನಂತರ 2010ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹೊಸಂಗಡಿ ಯಡಮೊಗೆ ಕಮಲಶಿಲೆ ಹಾಗೂ ಕುಂದಾಪುರಗಳ ದಿನಕ್ಕೆ 6 ಟ್ರಿಪ್‌ಗಳನ್ನು ಓಡಿಸಲಾಗುತ್ತಿತ್ತು.

ಆದರೆ ಕಮಲಶಿಲೆ, ಹೊಸಂಗಡಿ ರಸ್ತೆ ಸಂಪರ್ಕದಿಂದ ಯಡಮೊಗೆ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕೆಂಪುಕಲ್ಲು ಕ್ವಾರಿಗಳು ಆರಂಭವಾಗಿದ್ದು, ಪ್ರತಿದಿನ ನೂರಾರು ಕಲ್ಲು ಸಾಗಾಟದ ಲಾರಿಗಳು ಆಹೋರಾತ್ರಿ ನಿರಂತರ ಸಂಚಾರದಿಂದ ಈ ಭಾಗದ ರಸ್ತೆಗಳು ಕಳೆದ ಮೂರು ವರ್ಷದಿಂದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಡಾಂಬರು ಕಿತ್ತುಹೋಗಿದ್ದು, ಸವಾರರು ಧೂಳಿನಲ್ಲೇ ಸಂಚರಿಸಬೇಕಿದೆ. ರಸ್ತೆ ದುರವಸ್ಥೆಯಿಂದ ಈ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಇತ್ತೀಚೆಗೆ ರದ್ದುಗೊಳಿಸಲಾಗಿತ್ತು. ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಪುನಃ ಆರಂಭಿಸಲಾಗಿದೆ.

ಹದಗೆಟ್ಟ ರಸ್ತೆ ಬಗ್ಗೆ  ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಮತ್ತು ಮಳೆಗಾಲದಲ್ಲಿ ಯಡಮೊಗೆ ಹೊಸಂಗಡಿ ಸಂಪರ್ಕ ಕಲ್ಲು ಸಾಗಾಟದ ಲಾರಿ ತಡೆದು  ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ಆದರೆ  ಜಿಲ್ಲಾಡಳಿತವಾಗಲಿ, ಸ್ಥಳೀಯ ಆಡಳಿತವಾಗಲಿ ಅಭಿವೃದ್ಧಿ ಮಾಡಲಿಲ್ಲ ಎಂಬುದು ಸ್ಥಳೀಯರ ಆರೋಪ.

ಈ ಮಧ್ಯೆ ನಬಾರ್ಡ್‌ನಿಂದ ರೂ.40ಲಕ್ಷ ಬಿಡುಗಡೆಯಾಗಿದ್ದು, ಯಡಮೊಗೆ ಮುಖ್ಯ ರಸ್ತೆಯಿಂದ 600 ಮೀ ರಸ್ತೆ ಮಾತ್ರ ಅಭಿವೃದ್ಧಿ ಪಥದಲ್ಲಿದೆ. ಆದರೆ ಉಳಿದ ಏಳೂವರೆ ಕಿಮೀ ಉದ್ದದ ರಸ್ತೆ ಮಾತ್ರ ಡಾಂಬರು ಕಂಡಿಲ್ಲ. ಈ ಭಾಗದ ಜನತೆ ಯಾವ ಪಕ್ಷದ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಮಾಡುತ್ತಾರೋ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಗ್ರಾಮದ ಸುರೇಶ್ ಹೇಳುತ್ತಾರೆ.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.