ಬೈಂದೂರು: ‘ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದರಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಮನಗಂಡು ವನಸಂವರ್ಧನೆಗೆ ಆದ್ಯತೆ ನೀಡಬೇಕಾದ ಕಾಲ ಬಂದಿದೆ’ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ಮತ್ತು ವಂಡ್ಸೆ ವಲಯ, ಅತ್ರಾಡಿ ಮತ್ತು ದೇವಲ್ಕುಂದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಅರಣ್ಯ ಇಲಾಖೆ ಹಾಗೂ ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಅರಣ್ಯ ಸಂವರ್ಧನ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಅರಣ್ಯೀಕರಣ ಮತ್ತು ಜಲಸಂವರ್ಧನಾ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತ ಬಂದಿದೆ. ವನಸಂವರ್ಧನೆಗಾಗಿ ದೇವಾಲಯಗಳ ಪರಿಸರದಲ್ಲಿ ದೇವರಕಾಡು, ಸರಕಾರಿ ಭೂಮಿಗಳಲ್ಲಿ ಪ್ರಗತಿವನ, ಶಾಲಾ ಪರಿಸರಗಳಲ್ಲಿ ಶಾಲಾ ವನ, ಔಷಧಿ ವನ, ನವಗ್ರಹ ವನ ಮೊದಲಾದ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ.
ಜನರು ಇದನ್ನು ವ್ಯಾಪಕವಾಗಿ ಅನುಸರಿಸಬೇಕು ಎಂದ ಅವರು ಗಿಡಗಳನ್ನು ನಾಟಿ ಮಾಡಿದರೆ ಸಾಲದು. ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಇಂಗುಗುಂಡಿ ರಚನೆ, ತಡೆಕಟ್ಟುಗಳು, ಬೋರ್ವೆಲ್ ಮರುಪೂರಣ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇವೆಲ್ಲ ಕಾರ್ಯಕ್ರಮಗಳು ಜನರ ಸಹಭಾಗಿತ್ವದಲ್ಲಿ ನಡೆದರೆ ನಿರೀಕ್ಷಿತ ಯಶಸ್ಸು ಸಾಧಿಸಬಹುದು ಎಂದರು.
ಹಕ್ಲಾಡಿ ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಮಹಾಜನ ಸೇವಾ ಸಂಘದ ಕುಂದಾಪುರ ಶಾಖೆಯ ಅಧ್ಯಕ್ಷ ಕೆ. ಕೆ. ಕಾಂಚನ್, ಕಟ್ಬೇಲ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ತ್ರಾಸಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯೆ ಇಂದಿರಾ ಶೆಟ್ಟಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ಎಚ್. ಎಂ. ಕೃಷ್ಣ ಪೂಜಾರಿ, ಸಂಘಗಳ ಒಕ್ಕೂಟದ ವಂಡ್ಸೆ ವಲಯಾಧ್ಯಕ್ಷೆ ನಯನ, ವಂಡ್ಸೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಮಾಜಿ ವಲಯಾಧ್ಯಕ್ಷೆ ಸುಪ್ರೀತಾ ಶೆಟ್ಟಿ ಇದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ಯೋಜನಾಧಿಕಾರಿ ಶಶಿರೇಖಾ ಪಿ. ಸ್ವಾಗತಿಸಿದರು. ಸೇವಾ ಪ್ರತಿನಿಧಿ ರಾಜ ಎಸ್. ಪಿ. ವಂದಿಸಿದರು. ವಂಡ್ಸೆ ವಲಯ ಮೇಲ್ವಿಚಾರಕಿ ನೇತ್ರಾವತಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.