ADVERTISEMENT

ವಿಳಂಬ ಧೋರಣೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:09 IST
Last Updated 31 ಡಿಸೆಂಬರ್ 2017, 10:09 IST

ಉಡುಪಿ: ಕಾಮಗಾರಿ ವಿನಾಕಾ ರಣ ವಿಳಂಬ ಮಾಡುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದ ವಿವಿಧ ಇಲಾಖೆಗಳ ಎಂಜಿನಿಯರ್‌ಗಳ ವಿರುದ್ಧ  ಸಚಿವ ಪ್ರಮೋದ್ ಮಧ್ವರಾಜ್ ಹರಿಹಾಯ್ದರು.

ಶನಿವಾರ ಎಂಜಿನಿಯಯರ್‌ಗಳ ಸಭೆ ನಡೆಸಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ‘ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ ಏಕೆ’ ಎಂದು ಪ್ರಶ್ನಿಸಿದರು. ಕೆಲವರು ಕಾಮಗಾರಿಗಳು ಗುತ್ತಿಗೆದಾರರ ಕಾರಣದಿಂದ ವಿಳಂಬವಾಗುತ್ತಿದೆ ಎಂದು ಕೆಲವು ಎಂಜಿನಿಯರ್‌ಗಳು ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾರೂ ಸಹ ಸರ್ಕಾರಕ್ಕಿಂತ ದೊಡ್ಡವರಲ್ಲ. ಗುತ್ತಿಗೆದಾರರು ವಿಳಂಬ ಮಾಡುತ್ತಾರೆ ಎನ್ನುವ ನೀವು ಎಷ್ಟು ಮಂದಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದೀರ? ಗುತ್ತಿಗೆದಾರರು ಯಾರೇ ಇರಲಿ. ತಪ್ಪು ಮಾಡಿದಾಗ ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿ’ ಎಂದರು.

ಒಟ್ಟು ₹515 ಕೋಟಿ ವೆಚ್ಚದ 4481 ಕಾಮಗಾರಿಗಳು ಪೂರ್ಣವಾಗಿವೆ. ₹139 ಕೋಟಿ ಮೊತ್ತದ 453 ಪ್ರಗತಿಯಲ್ಲಿವೆ. ₹163 ಕೋಟಿ ಮೊತ್ತದ 424 ಕಾಮಗಾರಿ ಇನ್ನೂ ಆರಂಭವಾಗಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.

ADVERTISEMENT

ಮಲ್ಪೆ ಬಂದರಿನಿಂದ ಆದಿ ಉಡುಪಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಚ್ಪಥ ರಸ್ತೆ ಕಾಮಗಾರಿ ಆರಂಭವಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಏಕೆ ವಿಳಂಬ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್, ಆದಿ ಉಡುಪಿಯಿಂದ ಪರ್ಕಳದ ವರೆಗಿನ ಕಾಮಗಾರಿಗೆ ₹87 ಕೋಟಿ ಮೊತ್ತದ ಅಂದಾಜು ಪಟ್ಟಿ ತಯಾರಿಸಿ ಇಲಾಖೆಗೆ ಕಳುಹಿಸಲಾಗಿದೆ. ಮಲ್ಪೆ– ಬಂದರಿನಿಂದ ಆದಿ ಉಡುಪಿವರೆಗೆ ಭೂ ಸ್ವಾಧೀನಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ, ಆದ್ದರಿಂದ ವಿಳಂಬವಾಗುತ್ತಿದೆ. ಮಣಿಪಾಲ– ಪರ್ಕಳ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ರಿಪೇರಿ ಮಾಡಲು ಜಿಲ್ಲಾಧಿಕಾರಿ ಅವರು ₹30 ಲಕ್ಷ ಅನುದಾನ ನೀಡಿದ್ದಾರೆ ಎಂದು ಅವರು ಹೇಳಿದರು.

***

ಮಣಿಪಾಲ ಮಲ್ಪೆಯ ಭಾಗದಲ್ಲಿ ಗುಂಡಿ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ರಿಪೇರಿಗೆ ಡಿಸಿ ಅವರು ₹30 ಲಕ್ಷ ಹಣ ನೀಡಿದ್ದಾರೆ. ಇದಕ್ಕಾಗಿ ಇನ್ನೂ ₹2 ಕೋಟಿ ವಿಶೇಷ ಅನುದಾನ ತರಲಾಗುವುದು.
ಪ್ರಮೋದ್ ಮಧ್ವರಾಜ್,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.