ADVERTISEMENT

`ಶ್ರೀನಿವಾಸ ರಾಮಾನುಜನ್ ಗಣಿತ ಲೋಕದ ಧ್ರುವತಾರೆ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:29 IST
Last Updated 27 ಡಿಸೆಂಬರ್ 2012, 7:29 IST

ಉಡುಪಿ: `ಚಿಕ್ಕ ವಯಸ್ಸಿಗೆ ಅಪಾರ ಸಾಧನೆ ಮಾಡಿದ ಶ್ರೀನಿವಾಸ್ ರಾಮಾನುಜನ್ ಗಣಿತಲೋಕದ ಧ್ರುವತಾರೆ' ಎಂದು ಮಣಿಪಾಲ್ ತಾಂತ್ರಿಕ ಸಂಸ್ಥೆಯ ಗಣಿತ ಪ್ರಾಧ್ಯಾಪಕ ಡಾ.ರವಿಶಂಕರ್ ಭಟ್ ಅಭಿಪ್ರಾಯಪಟ್ಟರು.

ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ರಾಮಾನುಜನ್ ಅವರ 125ನೇ ಜನ್ಮ ದಿನೋತ್ಸವದ ಆಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಭಾರತೀಯ ಗಣಿತ ವಿಶಾರದನ 125ನೇ ಜನ್ಮದಿನದ ಸಂಸ್ಮರಣೆಗಾಗಿ 2012ನೇ ವರ್ಷವನ್ನು ಭಾರತ ಸರ್ಕಾರವು ರಾಷ್ಟ್ರೀಯ ಗಣಿತ ವರ್ಷ ಎಂದು ಆಚರಿಸುತ್ತಿರುವುದು ಅತ್ಯಂತ ಸಂದರ್ಭೋಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

11ನೇ ವಯಸ್ಸಿಗೇ ಪದವಿ ತರಗತಿಗಳ ಪಠ್ಯ ಪುಸ್ತಕಗಳನ್ನು ಅಭ್ಯಸಿಸಿದ, 16ನೇ ವಯಸ್ಸಿಗೇ 5ಸಾವಿರಕ್ಕೂ ಹೆಚ್ಚು ಕ್ಲಿಷ್ಟ ಪ್ರಮೇಯಗಳನ್ನು ಕರಗತಮಾಡಿಕೊಂಡ, 33ನೇ ವಯಸ್ಸಿಗೇ ಗಣಿತಶಾಸ್ತ್ರದ ಅದ್ಭುತ ನಂಬರ್ ಥಿಯರಿಗಳನ್ನು ಲೋಕಕ್ಕೆ ನೀಡಿದ ರಾಮಾನುಜನ್ ಭಾರತೀಯ ಎನ್ನುವುದು ಹೆಮ್ಮೆಯ ವಿಷಯ ಎಂದರು. ಅನಾರೋಗ್ಯದಿಂದ 33ನೇ ವಯಸ್ಸಿಗೆ ಗತಿಸಿಹೋದ ರಾಮಾನುಜನ್ ಇನ್ನಷ್ಟು ಕಾಲ ಬದುಕಿದ್ದರೆ ಇನ್ನೆಷ್ಟು ಸಾಧನೆಗಳಾ ಗುತ್ತಿದ್ದವು ಎನ್ನುವುದು ವಿದ್ವತ್ ಲೋಕದ ಊಹೆಗೂ ನಿಲುಕದ ಸಂಗತಿ ಎಂದು ಅವರು ಹೇಳಿದರು. ಬದುಕಿನ ಎಲ್ಲಾ ಅಂಗಗಳಲ್ಲೂ ಗಣಿತಶಾಸ್ತ್ರದ ತತ್ವಗಳು ಅಡಕವಾಗಿರುವುದನ್ನು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ಟ, ರಾಮಾನುಜನ್‌ರ ದೈತ್ಯಪ್ರತಿಭೆ ವಿಶ್ವಕ್ಕೆ ಅನಾವರಣಗೊಳ್ಳಬೇಕಾದರೆ ಒಬ್ಬ ಥಾಮಸ್ ಹಾರ್ಡಿಯೇ ಬೇಕಾಯ್ತು ಎನ್ನುವುದು ಆಶ್ಚರ್ಯದ ಸಂಗತಿ. ಗಣಿತಶಾಸ್ತ್ರದಲ್ಲಿ ಅಮೂರ್ತ ತೆಯಿದೆ, ಆ ಅಮೂರ್ತತೆಯಲ್ಲಿ ಆನಂದವಿದೆ ಎಂದು ತಿಳಿಸಿದರು.

ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧೀರಜ್ ಗಣಿತಶಾಸ್ತ್ರದ ದೈನಂದಿನ ಉಪಯುಕ್ತತೆಯನ್ನು ತಿಳಿಸಿದರು. ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಉಮಾ ಅತಿಥಿಗಳನ್ನು ಸ್ವಾಗತಿ ಸಿದರು. ಪೂಜಾ ವಂದಿಸಿದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಸಮದ್ಧ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.