ಸುಳ್ಯ: `ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾದುದು. ಹಾಗಾಗಿ ಈ ಕ್ಷೇತ್ರದಲ್ಲಿ 25 ವರ್ಷ ಕೆಲಸ ಮಾಡಿದರೂ ನಾನು ಇನ್ನೂ ಇಲ್ಲೇ ಇದ್ದೇನೆ~ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಸಂಪಾಜೆ ಸಹಕಾರಿ ಬ್ಯಾಂಕ್ನ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಹುಟ್ಟಿ ಸಹಕಾರ ಕ್ಷೇತ್ರಕ್ಕೆ ಬಂದವರು ತಂತಮ್ಮ ಜೇಬು ತುಂಬಿಸುವ ಕೆಲಸ ಮಾಡಿದ್ದಾರೆ. ಅವರಿಂದ ಈ ಕ್ಷೇತ್ರ ಕೂಡಾ ಇಂದು ಕೆಡುತ್ತಿದೆ ಎಂದು ಅವರು ವಿಷಾದಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹಕಾರ ಕ್ಷೇತ್ರದ ಕಾಶಿ ಎಂದು ಬಣ್ಣಿಸಿದರು. ಜಿಲ್ಲೆಯ ರೈತಾಪಿ ಜನರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಸಹಕಾರಿ ಸಂಸ್ಥೆ ಲಾಭದಲ್ಲಿದ್ದರೆ ರೈತರಿಗೆ ಭರವಸೆ ಇರುತ್ತದೆ. ಅವರೂ ಸಾಲವನ್ನು ಕ್ಲಪ್ತವಾಗಿ ಮರುಪಾವತಿ ಮಾಡುತತಾರೆ. ಆದರೆ ನಷ್ಟದಲ್ಲಿದ್ದರೆ ಶಾಪವಿದ್ದಂತೆ ಎಂದು ಶಾಸಕ ರಮಾನಾಥ ರೈ ಹೇಳಿದರು.
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್. ತಾ.ಪಂ. ಸದಸ್ಯೆ ಜಯಂತಿ ತೊಡಿಕಾನ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ಎಸ್.ದೇವರಾಜ್, ಎ.ವಿ,. ತೀಥರಾಮ, ಎಪಿಎಂಸಿ ಅಧ್ಯಕ್ಷ ಜಯರಾಮ ಹಾಡಿಕಲ್ಲು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ ಜಗದೀಶ ಅತಿಥಿಗಳಾಗಿದ್ದರು.
ಸಹಕಾರಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿ, ಉಪಾಧ್ಯಕ್ಷ ಮಹಮ್ಮದ್ ಕುಂಞಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಕೀರಪ್ಪ ವರದಿ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.