ADVERTISEMENT

`ಸಿ.ಡಿ ಪ್ರಕರಣ: ಬಿಜೆಪಿ ಶವ ಪೆಟ್ಟಿಗೆಗೆ ಅಂತಿಮ ಮೊಳೆ'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 10:16 IST
Last Updated 2 ಏಪ್ರಿಲ್ 2013, 10:16 IST

ಉಡುಪಿ: `ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ರಾವಣನ ಆದಿಯಾಗಿ ಎಲ್ಲ ಅಸುರರಂತೆ ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದಿದೆ. ಈಗ ನಡೆದಿರುವ ರಘುಪತಿ ಭಟ್ ಸಿ.ಡಿ. ಪ್ರಕರಣ ಬಿಜೆಪಿಯ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದಿದೆ' ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಉಡುಪಿಯ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಮತ್ತು ಬ್ಲಾಕ್ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಕೇಂದ್ರದಲ್ಲಿರುವ ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಭ್ರಷ್ಟಾಚಾರದಲ್ಲಿ ಲಕ್ಷ ಕೋಟಿಗಳನ್ನು ಪರಿಚಯಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ರಾಜ್ಯದಲ್ಲಿ ಆದಿಕಾರದ ಚುಕ್ಕಾಣೆ ಹಿಡಿಯುವ ಹಗಲುಗನಸು ಕಾಣುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಎರಡು ರಾಷ್ಟೀಯ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪದಡಿ ಜೈಲಿನ ಮುದ್ದೆ ಮುರಿದಿದ್ದಾರೆ. ಇಂತವರಿಗೆ ರಾಜ್ಯದ ಪ್ರಜ್ಞಾವಂತ ಮತದಾರರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ರಾಜ್ಯದ ಆಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ. ನಮಗೆ ಕುಮಾರಸ್ವಾಮಿ ಅವರ 20 ತಿಂಗಳ ಆಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ. ಅವರ ಕೆಲಸದ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಾರ್ಯಕರ್ತರ ಪಡೆಯನ್ನು ಈಗಾಗಲೇ ರಚಿಸಲಾಗಿದೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಗುಲಾಂ ಮಹಮ್ಮದ್, ಶಾಲಿನಿ ಶೆಟ್ಟಿ ಕೆಂಚನೂರು, ಶ್ರೀಕಾಂತ್ ಆಡಿಗ, ವಾಸುದೇವರಾವ್, ಲುವಿಸ್ ಲೊಬೊ, ಬೊಜರಾಜ ಶೆಟ್ಟಿ, ಸಬ್ಲಾಡಿ ಮಂಜಯ್ಯಶೆಟ್ಟಿ, ಸೂರ್ಯಕಾಂತ ಶೆಟ್ಟಿ, ಉದಯ ಹೆಗ್ಡೆ ಮಲ್ಲಾರು, ಜಯ ಕುಮಾರ್ ಪರ್ಕಳ, ಯೋಗಿಶ್ ಶೆಟ್ಟಿ ಕಾಪು, ಪಟ್ಲ ಆಣ್ಣಯ್ಯ ನಾಯಕ್, ಮಾರ್ಕ್ ಲುವಿಸ್ ಬ್ರಹ್ಮಾವರ, ಚಿಟ್ಟೆ ರಾಜ್ ಗೋಪಾಲ್ ಹೆಗ್ಡೆ, ಬಾಲಚಂದ್ರ ದೇವಾಡಿಗ, ಪದ್ಮನಾಭ ಕೊಟ್ಯಾನ್, ಪ್ರದೀಪ್ ಜಿ, ರಂಜನ್ ದಾಸ್ ಶೆಟ್ಟಿ, ಅರುಣಾ ಕಿಣಿ, ಯೋಗಿಶ್ ಪುಜಾರಿ ಬೆಳಪು,ರಾಮ್ ಪ್ರಕಾಶ್ ಶೆಟ್ಟಿ, ಜಹೀರ್ ಬೆಳಪು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.