ಬ್ರಹ್ಮಾವರ: ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದಲ್ಲಿ ಕಾರ್ಮಿಕ ಸಂಘ ಯಾವುದೇ ಹರತಾಳವನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಜ್ಯೋತಿ ಕೆ.ಎ.ಹೇಳಿದರು.
ಮಾಬುಕಳ ಹಂಗಾರಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆ, ಹಂಗಾರಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಉಡುಪಿ ವಕೀಲರ ಸಂಘದ ಆಶ್ರಯ ದಲ್ಲಿ ಭಾನುವಾರ ನಡೆದ ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು ಮತ್ತು ನೋಂದಣಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮೇರಿಕ, ರಷ್ಯ ಮುಂತಾದ ದೇಶದಲ್ಲಿ ಕಾರ್ಮಿಕರು ದೇಶವನ್ನೇ ಕಟ್ಟಿದ್ದು, ಅವರಲ್ಲಿ ದೇಶವನ್ನೇ ನಿರ್ಮಾಣ ಮಾಡುವ ಶಕ್ತಿ ಹುದುಗಿದೆ ಎಂದು ಸಾಭೀತು ಮಾಡಿದ್ದಾರೆ. ದುಡಿಮೆಯೇ ಅವರ ಬಂಡವಾಳ ಎಂದು ಅವರು ಹೇಳಿದರು.
ಕಾರ್ಮಿಕ ಸಂಘಟನೆಗಳು ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಅವರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಎನ್ ದೇವರಾಜು ಮಾತ ನಾಡಿ, ರಾಜ್ಯದಲ್ಲಿ 3ಲಕ್ಷಕ್ಕೂ ಕಾರ್ಮಿಕರು ನೋಂದಾ ಯಿಸಿಕೊಂಡಿದ್ದು, ಜಿಲ್ಲೆಯಲ್ಲಿ 13ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸಿ ಕೊಂಡಿದ್ದಾರೆ.
ವರ್ಷದಲ್ಲಿ 90 ದಿನಗಳ ಕಾಲ ಕೆಲಸ ಮಾಡಿದಲ್ಲಿ ಇಲಾಖೆಯಲ್ಲಿ ನೋಂದಾಯಿಸಿ ಕೊಳ್ಳಬಹುದು. ನೋಂದಾಯಿತ ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಉಪಕರಣಗಳನ್ನು ತೆಗೆದುಕೊಳ್ಳಲು ಸಾಲ, ಕೌಶಲ ತರಬೇತಿಯಂತಹ ಅನೇಕ ಸೌಲಭ್ಯಗಳು ಸಿಗುವ ಬಗ್ಗೆ ಮಾಹಿತಿ ಅವರು ನೀಡಿದರು.
ಇದೇ ಸಂದರ್ಭದಲ್ಲಿ ಹಂಗಾರಕಟ್ಟೆ, ಹಂದಾಡಿ, ಬ್ರಹ್ಮಾವರ ಮತ್ತು ಬಾರ್ಕೂರು ವ್ಯಾಪ್ತಿಯ ನೋಂದಣಿ ಮಾಡಿದ ಕಟ್ಟಡ ಕಾರ್ಮಿಕರಿಗೆ ಗುರುತಿಸಿ ಚೀಟಿಯನ್ನು ವಿತರಿಸಲಾಯಿತು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಟಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಸಂಘದ ಜೀವನ್ ಕುಮಾರ್ ಸ್ವಾಗತಿ ಸಿದರು. ಪ್ರಭಾಕರ ಆಚಾರ್ಯ ವಂದಿಸಿದರು. ಕಾರ್ಮಿಕ ನಿರೀಕ್ಷಕ ಕಮಲಾಕ್ಷ ಎಚ್. ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.