ADVERTISEMENT

ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಮರು ಆರಂಭ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 12:53 IST
Last Updated 10 ಜನವರಿ 2021, 12:53 IST
ಕೃಷ್ಣಮಠದಲ್ಲಿ ಸ್ಥಗಿತವಾಗಿದ್ದ ಭೋಜನ ವ್ಯವಸ್ಥೆಗೆ ಭಾನುವಾರ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಭಕ್ತರಿಗೆ ಅನ್ನಪ್ರಸಾದ ಬಡಿಸಿ ಮರು ಚಾಲನೆ ನೀಡಿದರು.
ಕೃಷ್ಣಮಠದಲ್ಲಿ ಸ್ಥಗಿತವಾಗಿದ್ದ ಭೋಜನ ವ್ಯವಸ್ಥೆಗೆ ಭಾನುವಾರ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಭಕ್ತರಿಗೆ ಅನ್ನಪ್ರಸಾದ ಬಡಿಸಿ ಮರು ಚಾಲನೆ ನೀಡಿದರು.   

ಉಡುಪಿ: ಕೋವಿಡ್‌ನಿಂದಾಗಿ ಕೃಷ್ಣಮಠದಲ್ಲಿ ಸ್ಥಗಿತವಾಗಿದ್ದ ಭೋಜನ ವ್ಯವಸ್ಥೆ ಭಾನುವಾರದಿಂದ ಆರಂಭವಾಯಿತು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾಸೋಹಕ್ಕೆ ಮರು ಚಾಲನೆ ನೀಡಿದರು.

ಬೆಳಿಗ್ಗೆ ದೇವರಿಗೆ ಅರ್ಪಿಸಲಾಗಿದ್ದ ಹಯಗ್ರೀವ ಹಾಗೂ ಪಾಯಸವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಬಡಿಸಲಾಯಿತು. 5,000 ಭಕ್ತರು ಭೋಜನ ಸ್ವೀಕರಿಸಿದರು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಮಾರ್ಚ್ 23ರಿಂದ ಅನ್ನ ಪ್ರಸಾದವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ದೇಗುಲ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಅನ್ನದಾಸೋಹ ವ್ಯವಸ್ಥೆ ಆರಂಭಿಸಿರಲಿಲ್ಲ. ವರ್ಷಾರಂಭದಲ್ಲಿ ಉಡುಪಿಗೆ ಭೇಟಿನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಠದಲ್ಲಿ ಭೋಜನದ ವ್ಯವಸ್ಥೆ ಮತ್ತೆ ಆರಂಭಿಸಿರುವುದು ಭಕ್ತರಿಗೆ ಅನುಕೂಲವಾದಂತಾಗಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಕೃಷ್ಣಮಠದಲ್ಲಿ ಭೋಜನದ ವ್ಯವಸ್ಥೆ ಇದೆ.

ADVERTISEMENT

ದರ್ಶನ ಮಾರ್ಗ ಬದಲಾವಣೆ:ಕೃಷ್ಣಮಠದಲ್ಲಿ ದೇವರ ದರ್ಶನದ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪೂರ್ವ ಈಶಾನ್ಯ ದಿಕ್ಕಿನಲ್ಲಿರುವ ಕಾಂಪ್ಲೆಕ್ ಮೂಲಕ ಸಾಗಿ, ಭೋಜನ ಶಾಲೆ, ಮಧ್ವ ಸರೋವರ, ಕಟ್ಟಿಗೆ ರಥ, ಸುವರ್ಣ ಗೋಪುರ ವೀಕ್ಷಣೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ, ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.