ADVERTISEMENT

ಪಡುಕೆರೆಯಲ್ಲಿ ಮರೀನಾ: ಪ್ರವಾಸೋದ್ಯಮ ಅಭಿವೃದ್ಧಿ

ಮಲ್ಪೆ ಬೀಚ್‌ ಉತ್ಸವಕ್ಕೆ ಚಾಲನೆ, ಭಾನುವಾರ ಗಾಳಿಪಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 15:03 IST
Last Updated 1 ಫೆಬ್ರುವರಿ 2020, 15:03 IST
ಮಲ್ಪೆ ಬೀಚ್‌ನಲ್ಲಿ ಶನಿವಾರ ಬೀಚ್ ಉತ್ಸವವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ಮಲ್ಪೆ ಬೀಚ್‌ನಲ್ಲಿ ಶನಿವಾರ ಬೀಚ್ ಉತ್ಸವವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.   

ಉಡುಪಿ: ಮಲ್ಪೆ ಮಾದರಿಯಲ್ಲಿ ಕದಿಕೆ, ಬೆಂಗ್ರೆ, ಟೆಗ್ಮಾವರೆಗೂ ಬೀಚ್‌ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಪಡುಕೆರೆ ಬೀಚ್‌ ಅನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಶನಿವಾರ ಮಲ್ಪೆ ಬೀಚ್‌ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಪಡುಕೆರೆಯಲ್ಲಿ ಮರೀನಾ ನಿರ್ಮಾಣ ಮಾಡುವ ಕುರಿತು ಚರ್ಚೆಗಳು ನಡೆದಿವೆ. ಇಲ್ಲಿ ಮರೀನಾ ನಿರ್ಮಾಣವಾದರೆ ವಿದೇಶಿ ಪ್ರವಾಸಿ ಹಡಗುಗಳು ನಿಲುಗಡೆಯ ತಾಣವಾಗಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು.

ಮೀನುಗಾರ ಸಮಾಜ ಹಾಗೂ ಮೀನುಗಾರರು ಒಟ್ಟಾಗಿ ಮರೀನಾ ನಿರ್ಮಾಣಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರೆ ಮುಂದಿನ ಬಜೆಟ್‌ನಲ್ಲಿ ಅನುದಾನ ಸಿಗಲಿದೆ. ಜತೆಗೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಸಲಹೆ ನೀಡಿದರು.

ADVERTISEMENT

ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಜೆಟ್ಟಿ ನಿರ್ಮಾಣವಾದರೆ, ಪ್ರವಾಸಿಗರು ಹೆಚ್ಚಾಗಲಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಟಾಸ್ಕ್‌ಫೋರ್ಸ್‌ ರಚಿಸಿದ್ದಾರೆ ಎಂದರು.

ಬೀಚ್‌ ಉತ್ಸವದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಕರಾವಳಿ ಕಾವಲುಪಡೆಯ ಎಸ್‌ಪಿ ಆರ್.ಚೇತನ್‌, ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್‌, ಮುಖಂಡ ಯಶ್‌ಪಾಲ್ ಸುವರ್ಣ ಇದ್ದರು.

2 ದಿನ ಬೀಚ್ ಉತ್ಸವ ನಡೆಯಲಿದ್ದು, ಭಾನುವಾರ ಮರಳು ಶಿಲ್ಪ ಪ್ರದರ್ಶನ, ಗಾಳಿಪಟ ಪ್ರದರ್ಶನ, ವೈನ್ ಹಾಗೂ ಆಹಾರ ಮೇಳ, ಡಾಗ್ ಶೋ, ವಾಲಿಬಾಲ್‌, ಥ್ರೋಬಾಲ್‌ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.