ಉಡುಪಿ: ಕರಾವಳಿ ಭಾಗದಲ್ಲಿ ಹಿಂದುತ್ವ ಹಾಗೂ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದಕ್ಕೆ ಮತದಾರರು ಅವಕಾಶ ನೀಡಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.
ಬೈಂದೂರು ತಾಲ್ಲೂಕಿನ ತ್ರಾಸಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.
ಹಿಂದುತ್ವಕ್ಕಾಗಿ ಇಲ್ಲಿನ ಯಾವ ರಾಜಕಾರಣಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ ಸಿಎಂ, ಧರ್ಮದ ಹೆಸರಿನಲ್ಲಿ ನಿಮ್ಮನ್ನು ಹೋರಾಟಕ್ಕೆ ಮುಂದೆಬಿಟ್ಟು ನಿಮ್ಮ ಮಕ್ಕಳ ಸಮಾಧಿ ಮೇಲೆ ಬಿಜೆಪಿ ನಾಯಕರು ಅಧಿಕಾರ ಹಿಡಿಯುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬೇಡಿ ಎಂದರು.
ನಿಮ್ಮ ಹೋರಾಟಗಳು ಕ್ಷೇತ್ರದ ಅಭಿವೃದ್ಧಿಯ ಪರವಾಗಿರಲಿ. ಸರ್ಕಾರ ಎಡವಿದರೆ, ಪ್ರತಿಭಟನೆ ಮಾಡಿ. ಚುನಾವಣೆಯಲ್ಲಿ ಕೇವಲ ಮತಗಳನ್ನು ಪಡೆಯಲು ಈ ಭಾಗದ ಅಭಿವೃದ್ಧಿ ಕಡೆಗೆ ಗಮನ ಕೊಡದೆ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗುವವರಿಗೆ ಬುದ್ಧಿಕಲಿಸಿ ಎಂದು ಸಿಎಂ ಆಕ್ರೋಷ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಪ್ರತಿದಿನ ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ. ಇದು ದೈವ ಪ್ರೇರಣೆಯಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ. ಅಷ್ಟು ಸುಲಭವಾಗಿ ಬೀಳುವುದಿಲ್ಲ ಎಂದು ಸಿಎಂ ಚಾಟಿಬೀಸಿದರು.
ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆಯಿಲ್ಲ. ತೆರಿಗೆ ಪಾವತಿಸುತ್ತಿರುವ ಜನರ ಖಜಾನೆ ಇದು. ಖಜಾನೆಗೆ ಹಣದ ದಾರಿದ್ರ್ಯ ಬಂದಿಲ್ಲ, ಭಾಗ್ಯಲಕ್ಮ್ಷಿ ತುಂಬಿದ್ದಾಳೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.