ಕುಂದಾಪುರ: ತಾಲ್ಲೂಕಿನ ಹೆಸ್ಕುತ್ತೂರು ಪರಿಸರದಲ್ಲಿ ಶುಕ್ರವಾರ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಸೆರೆಗೆ ಸಿಕ್ಕಿರುವ ಚಿರತೆಹಲವು ದಿನಗಳಿಂದ ಹೆಸ್ಕುತ್ತೂರು ಭಾಗದಲ್ಲಿ ಓಡಾಡುತ್ತಾ ನಾಗರಿಕರಲ್ಲಿ ಭಯ ಹುಟ್ಟಿಸಿತ್ತು. ಇಲ್ಲಿನ ಪೋಸ್ಟ್ ಮಾಸ್ಟರ್ ಶಂಕರ ಶೆಟ್ಟಿ ಅವರ ಹಟ್ಟಿಗೆ ಈಚೆಗೆ ನುಗ್ಗಿದ್ದ ಚಿರತೆ ಆತಂಕ ಸೃಷ್ಟಿಸಿತ್ತು. ಈ ಸಂಬಂಧಶಂಕರ ಶೆಟ್ಟಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ದಾಳಿ ವಿಚಾರ ತಿಳಿಸಿದ್ದರು.
ಅಧಿಕಾರಿಗಳು ಶಂಕರ ಶೆಟ್ಟಿ ಅವರ ಮನೆ ಸಮೀಪ ಬೋನಿಟ್ಟು ಅದರೊಳಗೆ ನಾಯಿಯನ್ನು ಕಟ್ಟಿಹಾಕಿದ್ದರು. ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಬಳಿಕ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ಡಿಎಫ್ಒ ಪ್ರಭಾಕರನ್ ಹಾಗೂ ಎಸಿಪಿ ಲೋಹಿತ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕರಾದ ವಿ.ಮಂಜು, ಶಂಕರ್, ಉದಯ್, ಅರಣ್ಯ ವೀಕ್ಷಕರಾದ ಸೋಮಶೇಖರ್, ವೆಂಕಟೇಶ್, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.