ADVERTISEMENT

ಬಡವರು, ಶ್ರೀಮಂತರ ಮಕ್ಕಳು ಒಟ್ಟಾಗಿ ಕಲಿಯಲಿ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 15:12 IST
Last Updated 18 ಜನವರಿ 2019, 15:12 IST
12ನೇ ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬೊಗಸೆಯಲ್ಲಿ ಸಾಗರ’ ಹಾಗೂ ‘ತುಳುವರ ನಾಡು–ನುಡಿ’ ಪುಸ್ತಕವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಉಪೇಂದ್ರ ಸೋಮಯಾಜಿ ಬಿಡುಗಡೆಗೊಳಿಸಿದರು.
12ನೇ ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬೊಗಸೆಯಲ್ಲಿ ಸಾಗರ’ ಹಾಗೂ ‘ತುಳುವರ ನಾಡು–ನುಡಿ’ ಪುಸ್ತಕವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಉಪೇಂದ್ರ ಸೋಮಯಾಜಿ ಬಿಡುಗಡೆಗೊಳಿಸಿದರು.   

ಉಡುಪಿ: ರಾಜ್ಯದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಬಡವರು, ಶ್ರೀಮಂತರ ಮಕ್ಕಳು ಒಟ್ಟಾಗಿ ಕಲಿಯುವ ವಾತಾವರಣ ನಿರ್ಮಾಣವಾಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರ 1 ಸಾವಿರ ಇಂಗ್ಲೀಷ್‌ ಶಾಲೆಗಳನ್ನು ತೆರೆಯಲು ಹೊರಟಿದೆ. ಇದನ್ನು ವಿರೋಧಿಸಿದರೆ ಬಡವರು ಮಾತ್ರ ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆ, ಇಂಗ್ಲಿಷ್‌ ಕಲಿಯಬಾರದೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸರ್ಕಾರದ ನಿರ್ಧಾರ ಬೆಂಬಲಿಸಿದರೆ, ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ಕಂದಕವನ್ನು ಸರಿಪಡಿಸಲು ಏಕರೀತಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.

ADVERTISEMENT

ರಾಜಕಾರಣಿಗಳ ಮಾಲೀಕತ್ವದಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ನಡೆಯುತ್ತಿರುವಾಗ ಏಕರೂಪದ ಶಿಕ್ಷಣ ಜಾರಿ ಕಷ್ಟಸಾಧ್ಯ. ಆದರೂ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಕನ್ನಡಪರ ಹೋರಾಟಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಸದಾ ಪ್ರತಿಧ್ವನಿಸುತ್ತಿರಲಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡಿ, ಸರ್ಕಾರಿ ಶಾಲೆಗಳನ್ನು ಬಲಪಡಿಸಲು, ಹೊಸದಾಗಿ ಆಂಗ್ಲ ಶಾಲೆಗಳನ್ನು ತೆರೆಯುವ ಅಗತ್ಯವಿಲ್ಲ. ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಿ, ಮಕ್ಕಳಿಗೆ ಇಂಗ್ಲೀಷ್‌ ಕಲಿಸಿದರೆ ಸಾಕು ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ, ಯುವಕರಲ್ಲಿ ಓದುವ ಆಸಕ್ತಿಯನ್ನು ಬೆಳೆಸಬೇಕಾಗಿದೆ. ಓದುವ ಸಂಸ್ಕೃತಿಯಿಂದ ವ್ಯಕ್ತಿತ್ವ ವಿಕಸನವಾಗಲಿದೆ. ಮಕ್ಕಳಿಗೆ ಸಾಹಿತ್ಯ ಬರೆಯುವಂತೆ ಪ್ರೋತ್ಸಾಹ ನೀಡಬೇಕಿದೆ. ತಾಳೆಗರಿಯ ಸಂರಕ್ಷಣೆ ಹಾಗೂ ಪುಸ್ತಕ ದಾನ ಅಭಿಯಾನಗಳು ನಿರಂತರವಾಗಿ ನಡೆಯಬೇಕು ಎಂದರು.

ಸಮ್ಮೇಳನಾಧ್ಯಕ್ಷ ಡಾ.ಗಣನಾಥ್ ಎಕ್ಕಾರು ಉಪಸ್ಥಿತರಿದ್ದರು. ಡಾ.ನಿಕೇತನ ಅವರ ‘ಬೊಗಸೆಯಲ್ಲಿ ಸಾಗರ’ ಹಾಗೂ ಸಚ್ಚಿದಾನಂದ ಅವರ ‘ತುಳುವರ ನಾಡು–ನುಡಿ’ ಪುಸ್ತಕವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಉಪೇಂದ್ರ ಸೋಮಯಾಜಿ ಬಿಡುಗಡೆಗೊಳಿಸಿದರು.

ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ರಶ್ಮಿ ಚಿತ್ತರಂಜನ್‌, ಲಯನ್ಸ್ ಭವನದ ಅಧ್ಯಕ್ಷ ರಾಜಗೋಪಾಲ್‌, ಕಸಾಪ ಗೌರವ ಕಾರ್ಯದರ್ಶಿ ಪೂರ್ಣಿಮಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ ಹೆಗ್ಡೆ ಗಾಂವ್ಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.