ಹೆಬ್ರಿ: ‘ಸೈನಿಕರಂತೆ ಆರ್ಟಿಐ ಕಾರ್ಯಕರ್ತರು ಕೆಲಸ ಮಾಡಬೇಕು. ಆ ಮೂಲಕ ಜಿಲ್ಲೆಯಲ್ಲಿ ಕಾರ್ಯಕರ್ತರ ದೊಡ್ಡ ಸೈನ್ಯವನ್ನು ನಾವು ಕಟ್ಟಬೇಕಿದೆ’ ಎಂದು ಉಡುಪಿ ಜಿಲ್ಲಾ ಆರ್ಟಿಐ ಕಾರ್ಯಕರ್ತರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸದಾಶಿವ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಆರ್ಟಿಐ ಕಾರ್ಯಕರ್ತರ ಸಮಿತಿಯ ವತಿಯಿಂದ ಹೆಬ್ರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಯಾರೂ ಕೂಡ ಹಣ ಮಾಡುವ ಉದ್ದೇಶದಿಂದ ಸಂಸ್ಥೆಗೆ ಸೇರಬೇಡಿ, ಇಲಾಖೆಗಳು ಮತ್ತು ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಮ ಸಮಾಜ ಕಟ್ಟುವ ಉದ್ದೇಶದಿಂದ ನಮ್ಮ ಸಮಿತಿಯು ಕೆಲಸ ಮಾಡುತ್ತದೆ. ಎಲ್ಲರೂ ಸೇರಿ ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಾಗಿದೆ’ ಎಂದರು.
ಮಾಹಿತಿ ಹಕ್ಕು ಜಿಲ್ಲಾ ಸಂಚಾಲಕ ಸತೀಶ್ ಪೂಜಾರಿ ಬಾರ್ಕೂರು ಮಾತನಾಡಿ, ‘ಆರ್ಟಿಐ ಕಾರ್ಯಕರ್ತರಾಗಲು ನಮ್ಮಲ್ಲಿ ಹಿಂಜರಿಕೆ ಬೇಡ, ಭ್ರಷ್ಟಾಚಾರವನ್ನು ಮುಕ್ತ ಮಾಡಿ ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವವರನ್ನು ಹಿಮ್ಮೆಟ್ಟಿಸುವುದೇ ನಮ್ಮ ಉದ್ದೇಶ. ಅದಕ್ಕಾಗಿ ಕಠಿಣವಾದ ಹೋರಾಟ ಮಾಡಬೇಕಿದೆ. ಕಾರ್ಯಕರ್ತರ ಜೊತೆಗೆ ಜಿಲ್ಲಾ ಸಮಿತಿಯ ನಿರಂತರವಾಗಿ ಇದೆ’ ಎಂದರು.
ಜಿಲ್ಲಾ ಸಮಿತಿಯ ಶೇಖರ ಹಾವಂಜೆ ಮತ್ತು ಕುಂದಾಪುರದ ಮಹೇಶ ಉಡುಪ ಮಾತನಾಡಿದರು. ಹೆಬ್ರಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಸಂದೇಶ ಶೆಟ್ಟಿ ಆರ್ಡಿ ಅವರಿಗೆ ಮಾಹಿತಿ ಪುಸ್ತಕ ಹಸ್ತಾಂತರಿಸಲಾಯಿತು. ಶೀಘ್ರದಲ್ಲೇ ಹೆಬ್ರಿ ತಾಲ್ಲೂಕು ಆರ್ಟಿಐ ಕಾರ್ಯಕರ್ತರ ಸಮಿತಿಯನ್ನು ರಚನೆಯನ್ನು ಮಾಡಲಾಗುವುದು ಎಂದು ಸಂದೇಶ ಶೆಟ್ಟಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.