ಶಿರಸಿ: ಇಲ್ಲಿನ ಎಂಇಎಸ್ ಪದವಿ ಪೂರ್ವ ಕಾಲೇಜಿನ ಅನ್ನಪೂರ್ಣಾ ಮಂದಿರದಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಊಟ ಮಾಡುತ್ತಾರೆ. ಆದರೆ ಇಲ್ಲಿ ಅಡುಗೆ ಸಿದ್ಧತೆ ಮಾಡುವವರಿಗೆ ಎಲ್ಪಿಜಿ ಚಿಂತೆ ಯಿಲ್ಲ. ಅಡುಗೆ ತ್ಯಾಜ್ಯದಿಂದ ಉತ್ಪಾ ದನೆಯಾಗುವ ಬಯೋಗ್ಯಾಸ್ ನಲ್ಲಿ ಇಲ್ಲಿನ ಮಕ್ಕಳಿಗೆ ಊಟ ಸಿದ್ಧವಾಗುತ್ತದೆ.
ಪ್ರತಿದಿನ ಉತ್ಪಾದನೆಯಾಗುವ 50ಕೆ.ಜಿ. ಅಡುಗೆ ತ್ಯಾಜ್ಯ ಬಳಸಿ 7 ಕ್ಯೂಬಿಕ್ ಮೀಟರ್ನಷ್ಟು ಬಯೋ ಗ್ಯಾಸ್ ಪಡೆಯಲಾಗುತ್ತಿದೆ. ಇದು ಶೇ 50ರಷ್ಟು ಅಡುಗೆ ಇಂಧನ ವೆಚ್ಚವನ್ನು ಕಡಿತ ಮಾಡಿದೆ. ಬಯೋಗ್ಯಾಸ್ ಘಟಕದಿಂದ ದ್ರವ ರೂಪದ ಗೊಬ್ಬರ ವಾರಕ್ಕೆ 2500 ಲೀಟರ್ ಉತ್ಪತ್ತಿಯಾಗುತ್ತಿದ್ದು, ಇದನ್ನು ತೋಟ, ಗದ್ದೆಗಳಿಗೆ ಬಳಸಬಹುದಾಗಿದೆ.
ಹಿಂದಿನ ಸರ್ಕಾರದಲ್ಲಿದ್ದ ಪಶ್ಚಿಮಘಟ್ಟ ಕಾರ್ಯಪಡೆಯ ರೂ. 50ಸಾವಿರ ಸಹಾಯಧನದೊಂದಿಗೆ ಕಾಲೇಜಿನಲ್ಲಿ ಬಯೋಗ್ಯಾಸ್ ಘಟಕ ನಿರ್ಮಿಸಲಾಗಿದೆ. ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ಮಂಗಳವಾರ ಭೇಟಿ ನೀಡಿ, ತಮ್ಮ ಅವಧಿಯಲ್ಲಿ ನೀಡಿದ ಅನುದಾನ ಸದ್ಬಳಕೆಯಾಗಿರುವುದನ್ನು ವೀಕ್ಷಿಸಿದರು.
ಅನ್ನ ಸಂತರ್ಪಣೆ ನಡೆಸುವ ಬನವಾಸಿ ಹಾಗೂ ಇಲ್ಲಿನ ಮಾರಿಕಾಂಬಾ ದೇವಸ್ಥಾನಕ್ಕೆ ಬೆಂಗಳೂರಿನ ಬಯೋಗ್ಯಾಸ್ ತಂತ್ರಜ್ಞರು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ದೊಡ್ಡ ಪ್ರಮಾಣದಲ್ಲಿ ಬಯೋಗ್ಯಾಸ್ ನಿರ್ಮಾಣಕ್ಕೆ ಮಾದರಿ ತಯಾರಿಸಿಕೊಡಲು ಆಸಕ್ತಿ ತೋರಿದ್ದಾರೆ. ಬನವಾಸಿಯ ಅನಾನಸ್ ಫ್ಯಾಕ್ಟರಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಸಹ ಬಯೋಗ್ಯಾಸ್ ಉತ್ಪಾದಿಸಬಹುದು ಎಂದು ಅಶೀಸರ ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ನಗರ ಸಭೆ ಪೌರಾಯುಕ್ತ ಕೆ.ಬಿ. ವೀರಾಪುರ ಮಾಧ್ಯಮದೊಂದಿಗೆ ಮಾತನಾಡಿ, ‘2014ರ ಮಾರ್ಚ್ ಒಳಗಾಗಿ ನಗರದ ಎಲ್ಲ ದೊಡ್ಡ ಹೋಟೆಲ್ಗಳು ಬಯೋಗ್ಯಾಸ್ ಸ್ಥಾವರವನ್ನು ಕಡ್ಡಾಯವಾಗಿ ನಿರ್ಮಾಣ ಮಾಡ ಬೇಕು. ಇಲ್ಲವಾದಲ್ಲಿ ಅವುಗಳ ಅನುಮತಿ ಪತ್ರ ರದ್ದುಗೊಳಿಸುವ ನಿಯಮ ಜಾರಿಗೊಳಿಸಬೇಕು ಎಂಬ ಕುರಿತು ನಗರಸಭೆ ಚಿಂತನೆ ನಡೆಸಿದೆ’ ಎಂದರು. ‘ನಗರದಲ್ಲಿ 18–20 ದೊಡ್ಡ ಹೋಟೆಲ್ಗಳಿದ್ದು, ಕಲ್ಯಾಣ ಮಂಟಪ ಗಳಲ್ಲಿ ಸಹ ಬಯೋಗ್ಯಾಸ್ ಸ್ಥಾವರ ನಿರ್ಮಿಸಬಹುದಾಗಿದೆ’ ಎಂದರು.
ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಉಪಸಮಿತಿಯ ಕೆ.ಎಸ್.ಶೆಟ್ಟರ್, ಅರ್ಥ್ವಿಷನ್ ಸಂಸ್ಥೆಯ ಸಂಚಾಲಕ ಆನಂದ ಹೆಗಡೆ, ಐ.ಎಂ.ಹೆಗಡೆ, ಪ್ರಾಚಾರ್ಯ ರಾಜೇಂದ್ರ ಹೆಗಡೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.