ADVERTISEMENT

ಆದೇಶ ರದ್ದತಿಗೆ 15 ದಿನದ ಗಡುವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:00 IST
Last Updated 8 ಫೆಬ್ರುವರಿ 2011, 9:00 IST

ಕಾರವಾರ: ಕಡಲ್ಗಾವಲು ಪಡೆಗೆ ಇಲ್ಲಿಯ ಕಡಲತೀರದಲ್ಲಿ ಜಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಕಾರವಾರ ಸಂರಕ್ಷಣಾ ಸಮಿತಿ ಈಚೆಗೆ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರಿಗೆ ಮನವಿ ಸಲ್ಲಿಸಿತು. ಉತ್ತರ ಕನ್ನಡ ಜಿಲ್ಲೆ ಕೇಂದ್ರ ಸ್ಥಾನವಾದ ಕಾರವಾರ ಅದ್ಭುತ ಸೃಷ್ಟಿ ಸೌಂದರ್ಯವನ್ನು ಪಡೆದಿದೆ. ಕರ್ನಾಟಕ ಹಾಗೂ ಗೋವಾ ಗಡಿಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶ ಇದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರವೀಂದ್ರನಾಥ ಟಾಗೋರ ಕಾರವಾರದ ಸೌಂದರ್ಯ ನೋಡಿ ‘ಕರ್ನಾಟಕದ ಕಾಶ್ಮೀರ’ ಎಂದು ಕರೆದಿದ್ದಾರೆ.ಇದೇ ಸ್ಥಳದಿಂದ ಸ್ಫೂರ್ತಿ ಪಡೆದ ಅವರು ‘ಗೀತಾಂಜಲಿ’ ಕೃತಿಯನ್ನು ರಚಿಸಿದ್ದಾರೆ. ಚುಟುಕು ಬ್ರಹ್ಮ, ದಿ. ದಿನಕರ ದೇಸಾಯಿ ಅವರೂ ಸಹ ಈ ಜಿಲ್ಲೆಯ ಸೌಂದರ್ಯವನ್ನು ಹಾಡಿಹೊಗಳಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ತಾಲ್ಲೂಕಿನ ಬಹುತೇಕ ಮೀನುಗಾರರು ಈ ಕಡಲತೀರದಲ್ಲಿ ಮೀನುಗಾರಿಕೆ ನಡೆಸಿಕೊಂಡು ಜೀವನೋಪಾಯ ಕಂಡುಕೊಂಡಿದ್ದಾರೆ. ಕಡಲತೀರದಲ್ಲಿರುವ ಜಮೀನು ಕಡಲ್ಗಾವಲು ಪಡೆಗೆ ಅಥವಾ ಬೇರೆ ಯಾರಿಗೆ ನೀಡಿದರು ಮೀನುಗಾರ ಬದುಕು ಅತಂತ್ರವಾಗಲಿದೆ.ತಾಲ್ಲೂಕಿನ ಪ್ರಮುಖ ತೀರಗಳು ನೌಕಾನೆಲೆ ಯೋಜನೆಗೆ ಸೇರಿದ್ದರಿಂದ ಬಹುತೇಕ ನಿರಾಶ್ರಿತರು ಕಾರವಾರದ ಕಡಲತೀರದಲ್ಲೇ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾರೆ.

ಕಡಲ್ಗಾಲುವೆ ಪಡೆಗೆ ನೀಡಿದ ಭೂಮಿ ಹೊರತು ಪಡಿಸಿ ಜಿಲ್ಲಾಡಳಿತ ಸಿಆರ್‌ಝ್ಾ ಕಾನೂನು ಉಲ್ಲಂಘನೆ ಮಾಡಿ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿರುವ 5ಎಕರೆ, ಯುವಜನ ಇಲಾಖೆಗೆ ನೀಡಿದ 1 ಎಕರೆ ಹಾಗೂ ಆರ್.ಎನ್.ಶೆಟ್ಟಿ ಅವರಿಗೆ ನೀಡಿದ 4 ಎಕರೆ ಜಮೀನನ್ನು ಈಗಾಗಲೇ ರದ್ದು ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಿಆರ್‌ಝ್ಾ ಕಾನೂನು ಉಲ್ಲಂಘನೆ ಮಾಡಿ ಈಗಾಗಲೇ ಕೆಲ ಇಲಾಖೆಗಳಿಗೆ ಹಾಗೂ ವ್ಯಕ್ತಿಗಳಿಗೆ ನೀಡಿದ ಜಮೀನು ಹಿಂದಕ್ಕೆ ಪಡೆದಿರುವ ನಿದರ್ಶನಗಳಿದ್ದರೂ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿರುವುದ ಹಿಂದೆ ಭೂ ಮಾಫಿಯಾ ಕೈಗಳಿವೆ ಎನ್ನುವ ಸಂಶಯ ಮೂಡುವಂತಾಗಿದೆ ಎಂದು ಸಮಿತಿ ಹೇಳಿದೆ.ಈ ಎಲ್ಲ ಅಂಶಗಳನ್ನು ಪರಿಶೀಲಿಸಿ 15 ದಿನದೊಳಗೆ ಜಮೀನು ಆದೇಶ ರದ್ದುಪಡಿಸುವ ಪ್ರಕ್ರಿಯೆ ನಡೆಯಬೇಕು. ಇಲ್ಲದೇ ಹೋರಾಟ ಅನಿವಾರ್ಯವಾಗಲಿದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.