ಭಟ್ಕಳ: ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ನಾಡಿನ ಪ್ರತಿಯೊಬ್ಬರಲ್ಲೂ ಕನ್ನಡ ಭಾಷಾಭಿಮಾನ ಹೆಚ್ಚಿಸುವ ಮೂಲಕ ಕನ್ನಡವನ್ನು ಕಟ್ಟುವ ಕೆಲಸಕ್ಕೆ ಸಾಹಿತ್ಯ ಪರಿಷತ್ನೊಂದಿಗೆ ಕೈಜೋಡಿಸಬೇಕು ಎಂದು ಭಟ್ಕಳ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿ.ಆರ್.ನಾಯ್ಕ ಮನವಿ ಮಾಡಿಕೊಂಡಿದ್ದಾರೆ.ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನ ಕಲಾವತಿ ಮತ್ತು ರಾಮನಾಥ ಶಾನಭಾಗ್ ಸಭಾಗೃಹದ ದಿ. ದುರ್ಗಪ್ಪ ಗುಡಿಗಾರ ವೇದಿಕೆಯಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಭಟ್ಕಳದ ಸಮಗ್ರ ಚಿತ್ರಣವನ್ನು ಅವರು ಬಿಡಿಸಿಟ್ಟರು.
ಭಟ್ಕಳದಲ್ಲಿ ಶಾಶ್ವತ ಕನ್ನಡಭವನ ಹಾಗೂ ಧ್ವಜಸ್ತಂಭ ನಿರ್ಮಾಣ ಮಾಡುವಂತೆ ಆಗ್ರಹಿಸಿದ ಅವರು, ಅಧಿಕಾರಿಗಳು ಕನ್ನಡ ಭಾಷೆಯನ್ನು ವ್ಯವಹಾರಕ್ಕೆ ಬೇಕಾಗುವ ವ್ಯಾಪ್ತಿಗಷ್ಟೇ ಸೀಮಿತಗೊಳಿಸಿದ್ದಾರೆ. ಕಚೇರಿಗೆ ಬರುವ ಬೇರೆ ಬೇರೆ ಧರ್ಮದ ಭಾಷಿಕರಲ್ಲಿ ಅವರ ಭಾಷೆಯಲ್ಲೇ ಮಾತನಾಡುವ ಮೂಲಕ ಕನ್ನಡ ಭಾಷೆಗೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲಿಯವರೆಗೆ ಕನ್ನಡಕ್ಕಾಗಿ ನಮ್ಮ ಕರ್ತವ್ಯ ಪಾಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮದೇ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಸ್ಥಾನಮಾನ ಸಿಗವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮರಾಠಿ, ಕೊಂಕಣಿ, ಖಾರ್ವಿ, ನವಾಯಿತರು, ದಖನಿಗಳು, ದಾಲ್ಜಿ ಸೇರಿದಂತೆ ಹಲವು ಜನಾಂಗದವರಲ್ಲಿ ಅವರವರ ಭಾಷೆಗಳ ಬದಲಾಗಿ ಕನ್ನಡ ಭಾಷಾಭಿಮಾನ ಮೂಡಿಸಬೇಕಾಗಿದೆ ಎಂದರು.
ಭಟ್ಕಳದಲ್ಲಿ ಆದ ಅಭಿವೃದ್ಧಿ, ಆಗಬೇಕಾದ ಅಭಿವೃದ್ಧಿ, ಸಮಸ್ಯೆಗಳು, ಚತುಷ್ಟಥ ರಸ್ತೆಯಾದರೆ ಅಭಿವೃದ್ಧಿಗೆ ಪೂರಕ ಎಂಬ ಆಗ್ರಹ, ಸರ್ವಜನಾಂಗದ ಸಂಪ್ರದಾಯ, ಕಟ್ಟಳೆಗಳ ಬಗ್ಗೆ ಸಮಗ್ರವಾಗಿ ಅವರುತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.