ADVERTISEMENT

ಖಾಪ್ರಿ ದೇವರಿಗೆ ಮದ್ಯದ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 9:20 IST
Last Updated 28 ಮಾರ್ಚ್ 2011, 9:20 IST
ಖಾಪ್ರಿ ದೇವರಿಗೆ ಮದ್ಯದ ಅಭಿಷೇಕ
ಖಾಪ್ರಿ ದೇವರಿಗೆ ಮದ್ಯದ ಅಭಿಷೇಕ   

ಕಾರವಾರ: ಜಾತ್ರೆ, ಉತ್ಸವದ ಸಂದರ್ಭದಲ್ಲಿ ದೇವರಿಗೆ ನೀರು, ಹಾಲು ಹಾಗೂ ವಿವಿಧ ಧಾನ್ಯಗಳಿಂದ ಅಭಿಷೇಕ ಮಾಡುವುದು ಸಾಮಾನ್ಯ. ಆದರೆ ಇಲ್ಲಿಯ ಕೋಡಿಭಾಗದ ಖಾಫ್ರಿ ದೇವರಿಗೆ ಸಾರಾಯಿ ಅಭಿಷೇಕ ಮಾಡುವ ವಿಶಿಷ್ಟವಾದ ಸಂಪ್ರದಾಯ ತಲತಲಾಂತರಗಳಿಂದ ನಡೆದು ಬಂದಿದೆ. ಇಲ್ಲಿಯ ಕಾಳಿಯ ಸಂಗಮದಲ್ಲಿರುವ ಖಾಪ್ರಿ ದೇವರ ಜಾತ್ರೆ ಭಾನುವಾರ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಿತು. ಖಾಪ್ರಿ ದೇವರಿಗೆ ಪ್ರತಿವರ್ಷದ ಜಾತ್ರೆಯ ಸಂದರ್ಭದಲ್ಲಿ ಮದ್ಯದ ಅಭಿಷೇಕ ನಡೆಯುತ್ತದೆ.

ಇಷ್ಟೇ ಅಲ್ಲ ಮದ್ಯದೊಂದಿಗೆ ಸಿಗರೇಟು, ಮೇಣದ ಬತ್ತಿಗಳನ್ನೂ ಭಕ್ತರು ದೇವರಿಗೆ ಅರ್ಪಿಸಿ ಹರಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಈ ಉತ್ಸವಕ್ಕೆ ರಾಜ್ಯದಿಂದಷ್ಟೇ ಅಲ್ಲ ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಖಾಪ್ರಿ ದೇವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.ಕೋಡಿಭಾಗದ ಪುರ್ಸಪ್ಪ ಮನೆತನದ ದೇವರ ಮೂಲ ಆಫ್ರಿಕಾ. ಅದಕ್ಕಾಗಿಯೇ ಇದಕ್ಕೆ ಖಾಪ್ರಿ ಎನ್ನುವ ಹೆಸರು ಬಂದಿದೆ ಎನ್ನುವುದು ಪ್ರತೀತಿ. ಖಾಪ್ರಿ ದೇವ ಕೇವಲ ಪುರ್ಸಪ್ಪ ಕುಟುಂಬಕ್ಕಷ್ಟೇ ಅಲ್ಲ ತನ್ನನ್ನು ನಂಬಿದ ಎಲ್ಲ ಭಕ್ತರನ್ನು ಕಾಪಾಡುತ್ತಾನೆ. ಪ್ರತಿನಿತ್ಯ ಅಲ್ಲದೇ ಭಾನುವಾರ ಹಾಗೂ ಬುಧವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಸಂಕಷ್ಟದಲ್ಲಿ ಸಿಲುಕಿದ ಸಂದರ್ಭದಲ್ಲಿ ಖಾಪ್ರಿ ದೇವರನ್ನು ನೆನೆದರೆ ಅಪಾಯದಿಂದ ಪಾರಾಗುತ್ತಾರೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಈ ಕಾರಣಕ್ಕಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ.ತುಲಾಭಾರ ಸೇವೆಯೂ ಇಲ್ಲಿ ನಡೆಯುತ್ತದೆ. ತೆಂಗಿನಕಾಯಿ. ಬಾಳೆಗೊನೆ ಹಣ್ಣು- ಹಂಪಲಗಳನ್ನು ಭಕ್ತರು ದೇವರಿಗೆ ನೀಡುತ್ತಾರೆ.ಭಕ್ತರು ದೇವರಿಗೆ ಅರ್ಪಿಸಿದ ದವಸ-ಧಾನ್ಯಗಳಿಂದಲೇ ಅಡುಗೆ ತಯಾರಿಸಿ ಜಾತ್ರೆಯ ಸಂದರ್ಭದಲ್ಲಿ ಅನ್ನಸಂರ್ಪಣೆ ಮಾಡಲಾಗುತ್ತದೆ. ಭಕ್ತರನ್ನು ರಕ್ಷಿಸುವ ಆದಿ ದೇವನ ಸನ್ನಿಧಿಗೆ ಹಿಂದುಗಳಷ್ಟೇ ಅಲ್ಲ ಮುಸ್ಲಿಮ್, ಕ್ರಿಶ್ಚಿಯನ್ನರು ಬರುತ್ತಿದ್ದು ಇದೊಂದು ಭಾವೈಕ್ಯದ ಜಾತ್ರೆಯೂ ಆಗಿದೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.