ಯಲ್ಲಾಪುರ: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಅರಣ್ಯ ಕಾವಲುಗಾರ ಮಾದೇವ್ ಸಿದ್ದಿ ಕೊಲೆಗಾರರನ್ನು ಶಿಘ್ರವಾಗಿ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಮಾದೇವ್ ಸಿದ್ದಿ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಿದ್ದಿ ಜನಜಾಗೃತಿ ಹಾಗೂ ಅಭಿವೃದ್ಧಿ ಟ್ರಸ್ಟ್ ಯಲ್ಲಾಪುರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು.ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ರವಿಂದ್ರನಾಥ ನಾಯ್ಕ, `ಸರ್ಕಾರಿ ಕರ್ತವ್ಯದ ಮೇಲಿದ್ದ ಮಾದೇವ್ ಸಿದ್ದಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ನಡೆಸಿರುವುದು , ಹಿಂದುಳಿದ ವರ್ಗದ ಜನರಲ್ಲಿ ಅಭದ್ರತೆಯ ಭಯ ಕಾಡುತ್ತಿದೆ. ಪೊಲೀಸ್ ಇಲಾಖೆ ಕೊಲೆಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಿ ನ್ಯಾಯ ಒದಗಿಸಿಕೊಡಬೇಕಿದೆ.
ಮಾದೇವ ಸಿದ್ದಿ ಕುಟುಂಬಕ್ಕೆ ಕನಿಷ್ಠ ರೂ 5 ಲಕ್ಷ ಪರಿಹಾರ ಹಣ ನೀಡಬೇಕು' ಎಂದರು. ಜಾನ್ ಸಿದ್ದಿ, ಲಾರೆನ್ಸ್ ಸಿದ್ದಿ, ಬೆನಿತ್ ಸಿದ್ದಿ, ಶಾಂತಾರಾಮ ಸಿದ್ದಿ, ಶೇಖರ ಸಿದ್ದಿ , ದ್ಯಾಮಣ್ಣ ಭೋವಿವಡ್ಡರ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿ, ಒಂದು ವಾರದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಬೇಕು ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.