ADVERTISEMENT

ಭ್ರಷ್ಟಾಚಾರದ ವಿರುದ್ಧ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:25 IST
Last Updated 18 ಫೆಬ್ರುವರಿ 2011, 9:25 IST

ಯಲ್ಲಾಪುರ: ದೇಶವು ಮತಾಂತರದ ಹಾವಳಿ, ಭಯೋತ್ಪಾದನೆ ಹಾಗೂ ಭ್ರಷ್ಟಾಚಾರದಿಂದ ತತ್ತರಿಸಿದೆ. ಇವುಗಳನ್ನು ತೊಲಗಿಸಲು ಭಕ್ತರು ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದು  ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಮಹಾಸ್ವಾಮಿಗಳು ನುಡಿದರು. ಯಲ್ಲಾಪುರದ ಈಶ್ವರ ದೇವಸ್ಥಾನದಲ್ಲಿ ದೇವರಿಗೆ ಬೆಳ್ಳಿ ಪ್ರಭಾವಳಿ ಹಾಗೂ ರಜತ ಶೃಂಘ ಅರ್ಪಿಸಿ ಅವರು ಮಾತನಾಡಿದರು.

ಹಿಂದೆ ಸಮುದ್ರ ಮಂಥನದ ಸಂದರ್ಭದಲ್ಲಿ ವಿಷ ಬಂದಾಗ ಲೋಕಕ್ಕೆ ಅಮೃತ ದೊರೆಯಬೇಕು ಎಂದು ಶಿವ ವಿಷ ಕುಡಿದು ವಿಷಕಂಠನಾದ. ಜೀವನದಲ್ಲಿ ಇದನ್ನು ನಾವು ಅನುಸರಿಸಲು ಪ್ರಯತ್ನಿಸಬೇಕು ಎಂದರು. ಇನ್ನೊಬ್ಬರ ಸುಖಕ್ಕಾಗಿ ನಾವು ಕಷ್ಠ ಪಟ್ಟರೆ ಅದು ತಪ. ಸುಖಕ್ಕಾಗಿ ಕಷ್ಠ ಪಟ್ಟರೆ ಅದು ತಾಪ.  ಇನ್ನೊಬ್ಬರಿಗೆ ಕಷ್ಟ ಬಂದಾಗ ಅದನ್ನು ನಿವಾರಿಸಲು ಪ್ರಯತ್ನ ಪಟ್ಟರೆ  ದೇಶಕ್ಕೆ ಒಳ್ಳೆಯದಾಗುತ್ತದೆ. ಇದೇ ಭಗವಂತನಿಗೆ ಅರ್ಪಿಸುವ ಬಹುದೊಡ್ಡ ಪೂಜೆ. ಹಿಂದೂ ಸಮಾಜದ ಎಲ್ಲ ವರ್ಗದ ಜನರ ಸಂಕಷ್ಠ ಪರಿಹಾರವಾಗಬೇಕು ಎನ್ನುವುದು ನಮ್ಮ ಸಂಕಲ್ಪವಾಗಲಿ ಎಂದರು.

ಶ್ರೀಗಳು ಸಮುದ್ರ ಉಪ್ಪು ನೀರು ನೀಡಿದರೆ, ಸೂರ್ಯ ಸಿಹಿ ನೀರನ್ನು ನೀಡುತ್ತಾನೆ ಉಪ್ಪಾಗಲಿ, ಸಿಹಿಯಾಗಲಿ ಅರ್ಪಣಾ ಮನೋಭಾವ ನಮ್ಮಲ್ಲಿರಬೇಕು. ಭಗವಂತನದ್ದನ್ನು ಅವನಿಗೇ ಅರ್ಪಿಸಿದ್ದೇವೆ. ನಾವು ಅವನಿಗೆ ನೀಡಿದ್ದು ನಾಲ್ಕು ಪಟ್ಟಾಗಿ ತಿರುಗಿ ನಮಗೇ ಬರುತ್ತದೆ. ನಾವು ಅರ್ಪಿಸಿದ್ದೇವೆ ಎಂಬ ಅಹಂಕಾರ ಸಲ್ಲದು. ನಾವು ಇಂದು ನಾವು ದೇವರಿಗೆ ಕವಚ ಅರ್ಪಿಸಿದ್ದೇವೆ .ಅದು ಈ ಊರಿನ ಜನರಿಗೇ ಕವಚ ಅರ್ಪಿಸಿದಂತಾಗಿ ಭದ್ರತೆ ನಿಡುತ್ತದೆ ಎಂದರು.

ವಿಶ್ವನಾಥ ಭಟ್ಟ ಸಂಗಡಿಗರು ವೇದ ಘೋಷ ಮಾಡಿದರು. ಅನಂತ ಭಟ್ಟ ಸಿದ್ರಪಾಲ್ ಮಾತನಾಡಿದರು. ಈಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಗೇಶ ಕೈಸರೆ ಸ್ವಾಗತಿಸಿದರು.ಸ್ವಾಗತ ಸಮಿತಿ ಅಧ್ಯಕ್ಷ ಘನಶ್ಯಾಂ ವೇರ್ಣೆಕರ ದಂಪತಿ  ಶ್ರೀಗಳಿಗೆ ಗೌರವಾರ್ಪಣೆ ಮಾಡಿದರು. ಆಡಳಿತ ಸಮಿತಿ ಕಾರ್ಯದರ್ಶಿ ಅಂಬರೀಷ ಮಲ್ಮನೆ ನಿರೂಪಿಸಿದರು.  ಸ್ವಾಗತ ಸಮಿತಿ ಕಾರ್ಯದರ್ಶಿ ನಾಗರಾಜ ಮದ್ಗುಣಿ ವಂದಿಸಿದರು. . ವಿಶ್ವ ಹಿಂದೂ ಪರಿಷತ್ತಿನ ಗಣಪತಿ ದೇವಸ್ಥಾನದಿಂದ ಶ್ರಿಗಳನ್ನು ಗ್ರಾಮದೇವಿ ದೇವಸ್ಥಾನದ ವರೆಗೆ ಬೈಕ್ ರ್ಯಾಲಿ ಮೂಲಕ ಕರೆತರಲಾಯಿತು. ಗ್ರಾಮದೇವಿ ದೇವಸ್ಥಾನದಿಂದ ಈಶ್ವರ ದೇವಸ್ಥಾನದ ವರೆಗೆ  ಶ್ರೀಗಳ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.