ADVERTISEMENT

`ಮಕ್ಕಳು ಸಂಸ್ಕೃತಿಯ ರಾಯಭಾರಿ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 8:56 IST
Last Updated 24 ಡಿಸೆಂಬರ್ 2012, 8:56 IST

ಸಿದ್ದಾಪುರ: `ಮಕ್ಕಳು ನಮ್ಮ ಸಂಸ್ಕೃತಿಯ ರಾಯಭಾರಿಗಳು' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.

ಪಟ್ಟಣದ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಸಂಸ್ಕೃತಿಯನ್ನು ಬೆಳಕಿಗೆ ತರುವ ಮತ್ತು ಹಸ್ತಾಂತರಿಸುವ ಕೆಲಸವನ್ನು ಪ್ರತಿಭಾ ಕಾರಂಜಿಯ ಮೂಲಕ  ಶಿಕ್ಷಣ ಇಲಾಖೆ ಮಾಡುತ್ತಿದೆ. ಸಮೃದ್ಧವಾಗಿರುವ ನಮ್ಮ ಕಲೆ ಇಂದು ದೂರವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅದನ್ನು ಉಳಿಸುವಲ್ಲಿ ಮಕ್ಕಳು ಸಮರ್ಥರು ಎಂಬುದು ನಮ್ಮ ನಂಬಿಕೆ' ಎಂದರು.

`ಕಡ್ಡಾಯ ಶಿಕ್ಷಣ ಜಾರಿಗೆ ಬಂದಿದ್ದು, ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಬಾಲಕಾರ್ಮಿಕರಾಗಬಾರದು ಎಂಬುದು ನಮ್ಮ ಉದ್ದೇಶ. ಮಕ್ಕಳು ಕೇವಲ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪಡೆದರೆ ಸಾಲದು;  ಇನ್ನೂ ಹೆಚ್ಚು ಶಿಕ್ಷಣ ಪಡೆಯವತ್ತ ಗಮನಕೊಡಬೇಕು' ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ರಾಮ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಲಿನಿ ಗೌಡರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ನಾಯ್ಕ, ಡಿಡಿಪಿಐ ಪ್ರಸನ್ನಕುಮಾರ, ತಾಲ್ಲೂಕು  ಪ್ರೌಢಶಾಲಾ ಅನುದಾನಿತ ನೌಕರರ ಸಂಘದ ಅಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡು, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಡಹಾಕ್ ಸಮಿತಿ ಅಧ್ಯಕ್ಷ ಎಂ.ಕೆ.ನಾಯ್ಕ, ತಾಲ್ಲೂಕು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಂ.ನಾಯ್ಕ ಉಪಸ್ಥಿತರಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಧನ್ಯಾ,ಮೇಘನಾ ಸ್ವಾಗತ ನೃತ್ಯ ಮಾಡಿದರು. ಲಾವಣ್ಯ ಸಂಗಡಿಗರು ನಾಡಗೀತೆ ಮತ್ತು ರೈತಗೀತೆ  ಹಾಡಿದರು. ಬಿಇಒ ಬಿ.ವಿ.ನಾಯ್ಕ ಸ್ವಾಗತಿಸಿದರು. ವಿನೋದಾ ಭಟ್ಟ, ಗುರುರಾಜ ನಾಯ್ಕ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.