ಶಿರಸಿ: ಮಾರಿಕಾಂಬಾ ಜಾತ್ರೆಯ ಪೂರ್ವ ಧಾರ್ಮಿಕ ವಿಧಿಯಂತೆ ಬುಧವಾರ ಜಾತ್ರಾ ಗದ್ದುಗೆಯಲ್ಲಿ ಅಂಕೆ ಹಾಕುವ ಕಾರ್ಯಕ್ರಮ ಜರುಗಿತು.
ನಿಯಮದಂತೆ ಆಸಾದಿ ಕುಟುಂಬದವರು, ಬಾಬುದಾರರು, ದೇವಾಲಯದ ಆಡಳಿತ ಮಂಡಳಿಯವರು ಕಲ್ಯಾಣ ಮಹೋತ್ಸವದ ಪೂರ್ವ ವಿಧಿಯಂತೆ ಕಂಕಣ ಕಟ್ಟಿಕೊಂಡರು. ಬಿಡಕಿ ಬೈಲಿನ ಜಾತ್ರಾ ಗದ್ದುಗೆ ಎದುರು ಅಂಕೆ ಹಾಕುವ ಕಾರ್ಯಕ್ರಮವನ್ನು ಆಸಾದಿ ಹಾಗೂ ಮೇತ್ರಿ ಕುಟುಂಬದವರು ನಡೆಸಿದರು.
ದೇವಾಲಯದಿಂದ ಮೆರವಣಿಗೆಯಲ್ಲಿ ತಂದ ಮಾರಿಕೋಣಕ್ಕೆ ಗದ್ದುಗೆಯ ಎದುರು ಎಲ್ಲರೂ ಹೂವು, ಅಕ್ಷತೆ ಹಾಕಿ ಪೂಜೆ ಸಲ್ಲಿಸಿ, ಕಂಕಣ ಕಟ್ಟಿದರು. ಕಂಕಣ ಕಟ್ಟುವ ಶಾಸ್ತ್ರವೇ ಅಂಕೆ ಹಾಕುವ ಕಾರ್ಯಕ್ರಮ. ಅನೇಕ ವರ್ಷಗಳ ಹಿಂದೆ ಈ ಸಂದರ್ಭದಲ್ಲಿ ಕುರಿ ಬಲಿ ನೀಡಲಾಗುತ್ತಿತ್ತು. ಆದರೆ ಮಾರಿಕಾಂಬಾ ಜಾತ್ರೆ ಯಲ್ಲಿ ಪ್ರಾಣಿವಧೆಯನ್ನು ನಿಲ್ಲಿಸಿರುವುದರಿಂದ ಕುಂಬಳ ಕಾಯಿಯ ಸಾತ್ವಿಕ ಬಲಿ ನಡೆಸಲಾಯಿತು.
ಇದೇ ವೇಳೆಗೆ ನಾಡಿಗ ಬಾಬುದಾರರು ಜಾತ್ರಾ ಗದ್ದುಗೆಗೆ ಮಂಗಳಾರತಿ ಮಾಡಿದರು. ಈ ಮಂಗಳಾರತಿ ಬೆಳಗಿದ ದೀಪದಿಂದ ಒಂದು ಹಣತೆ ಬೆಳಗಿಸಲಾಯಿತು. ಜಾತ್ರೆಯ ಎಲ್ಲ ವಿಧಿ–ವಿಧಾನಗಳು ಮುಗಿಯುವ ತನಕ ಈ ದೀಪ ಆರುವಂತಿಲ್ಲ. ದೀಪ ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ಮೇಟಿಗರದ್ದಾಗಿದೆ. ಈ ದೀಪಕ್ಕೆ ಮೇಟಿ ದೀಪ ಎನ್ನುವರು. ಜಾತ್ರಾ ಗದ್ದುಗೆಯಿಂದ ದೇವಾಲಯಕ್ಕೆ ಮೇಟಿ ದೀಪವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಇನ್ನು ಮೇತ್ರಿ ಕುಟುಂಬದವರು ಕಂಕಣ ಕಟ್ಟಿಕೊಂಡ ಮಾರಿಕೋಣವನ್ನು ನಗರದ ಗಲ್ಲಿ ಗಲ್ಲಿಗಳಲ್ಲಿ ಕೊಂಡೊಯ್ಯುತ್ತಾರೆ. ಮಹಿಳೆಯರು ಮಾರಿಕೋಣಕ್ಕೆ ಅರಿಶಿಣ–ಕುಂಕುಮ ಹಚ್ಚಿ ಪೂಜಿಸಿ, ಅಕ್ಕಿ–ಕಾಯಿ ನೀಡಿ ಗೌರವಿಸುತ್ತಾರೆ.
ದೇವಾಲಯದ ಎದುರು ದೇವಾಲಯದ ಬಾಬುದಾರ ಕುಟುಂಬದ ಆಚಾರಿಗಳು, ಬಡಿಗೇರರು, ಉಪ್ಪಾರರು ರಥ ನಿರ್ಮಾಣ ಕೆಲಸ ಪ್ರಾರಂಭಿಸಿದ್ದಾರೆ. ಜಾತ್ರೆಗೆ ಏಳು ದಿನ ಮುಂಚಿತ ವಾಗಿ ರಥ ಕಟ್ಟುವ ಕೆಲಸ ಪ್ರಾರಂಭಿಸುವುದು ವಾಡಿಕೆ. ಮಾರಿಕಾಂಬಾ ಜಾತ್ರೆ ಇದೇ 11ರಿಂದ ಪ್ರಾರಂಭವಾಗಲಿರುವುದರಿಂದ ಮಂಗಳವಾರ ದಿಂದ ರಥ ಕಟ್ಟುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಬುಧವಾರ ದೇವಿಯ ವಿಗ್ರಹ ವಿಸರ್ಜನೆ ಮಾಡಲಾಗಿದ್ದು, ಜಾತ್ರಾ ಉತ್ಸವ ಆರಂಭ ವಾಗುವ ತನಕ (ಮಾರ್ಚ್ 11) ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.