ಸಿದ್ದಾಪುರ: `ಮನರಂಜನೆಯ ಮಾಧ್ಯಮಗಳಿರದ ಹಿಂದಿನ ಕಾಲದಲ್ಲಿ ದುಡಿಮೆಯ ಶ್ರಮ ಪರಿಹಾರಕ್ಕಾಗಿ ಜಾನಪದ ಕಲೆ ಬೆಳೆದುಬಂದಿತು' ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಹೆಗಡೆ ಕಾಗೇರಿ ಹೇಳಿದರು.
ಹಾಳದಕಟ್ಟಾದ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ `ಜಾನಪದ ಕಲೋತ್ಸವ, 2012-2013' ಕಾರ್ಯಕ್ರಮದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
`ಜಾನಪದ ಕಲೆಗೆ ಯಾವುದು ಮೂಲ ಅಥವಾ ಅದಕ್ಕೆ ಗುರು ಯಾರು ಎಂದು ಹೇಳುವುದು ಕಷ್ಟ. ಹಿಂದಿನ ಕಾಲದಲ್ಲಿ ಜಾನಪದ ಕಲೆ ಒತ್ತಡ ನಿವಾರಕದಂತೆ ಕೆಲಸ ಮಾಡುತ್ತಿತ್ತು. ಆದರೆ ಇಂದು ಒತ್ತಡ ನಿವಾರಣೆಗೆ ಚಟಗಳಿಗೆ ಬಲಿಯಾಗುತ್ತಿದ್ದೇವೆ' ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಜಿ.ಹೆಗಡೆ ಅಜ್ಜೀಬಳ ಮತ್ತು ಆಶಾಕಿರಣ ಟ್ರಸ್ಟ್ನ ಟ್ರಸ್ಟಿ ಸಿ.ಎಸ್.ಗೌಡರ್ ಮಾತನಾಡಿದರು. ಆಶಾಕಿರಣ ಟ್ರಸ್ಟ್ನ ಮತ್ತೊಬ್ಬ ಟ್ರಸ್ಟಿ ಕೇಶವ ಶಾನಭಾಗ ವೇದಿಕೆಯಲ್ಲಿದ್ದರು. ಟ್ರಸ್ಟ್ನ ಉಪಾಧ್ಯಕ್ಷ ಡಾ.ಮಧುಸೂದನ ಶಾಮೈನ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಜಗದ್ಗುರು ಮುರುಘರಾಜೇಂದ್ರ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಾರಾಯಣ ರಾಯಕರ್ ಮತ್ತು ಜೋಯಲ್ ಫರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.
ನಾಗರಾಜ ದೋಶೆಟ್ಟಿ ಸ್ವಾಗತಿಸಿದರು. ಸುಧೀರ್ ಬೇಂಗ್ರೆ ನಿರೂಪಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.