ADVERTISEMENT

ಹೋರಾಟ ಬೆಂಬಲಿಸಿ ದೆಹಲಿಗೆ ಬರಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 7:25 IST
Last Updated 7 ನವೆಂಬರ್ 2017, 7:25 IST
ಕಾಳಿ ಬ್ರಿಗೇಡ್ ಸಮಾವೇಶವನ್ನು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಉದ್ಘಾಟಿಸಿದರು. ರವೀಂದ್ರನಾಥ ನಾಯ್ಕ, ರಮೇಶ ನಾಯ್ಕ ಹಾಗೂ ರವಿ ರೇಡ್ಕರ್ ಇದ್ದಾರೆ
ಕಾಳಿ ಬ್ರಿಗೇಡ್ ಸಮಾವೇಶವನ್ನು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಉದ್ಘಾಟಿಸಿದರು. ರವೀಂದ್ರನಾಥ ನಾಯ್ಕ, ರಮೇಶ ನಾಯ್ಕ ಹಾಗೂ ರವಿ ರೇಡ್ಕರ್ ಇದ್ದಾರೆ   

ಜೊಯಿಡಾ (ದಾಂಡೇಲಿ): ಕಾಳಿ ಬ್ರಿಗೇಡ್ ಜೊಯಿಡಾದವರು ತಾಲ್ಲೂಕಿನ ಮೂಲಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ಮಾಡುತ್ತಿದ್ದಾರೆ. ಇಂತಹ ರಾಜಕೀಯೇತರ ಹೋರಾಟಗಳಿಗೆ ನನ್ನ ಸಂಪೂರ್ಣ ಬೆಂಬಲ ಇದ್ದು, ಅವರ ಹೋರಾಟಗಳಿಗಾಗಿ ಜೊಯಿಡಾದಿಂದ ದೆಹಲಿಗೆ ಹೋಗಲು ಸಿದ್ಧ ಎಂದು ಬೈಲೂರಿನ ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಜೊಯಿಡಾದಲ್ಲಿ ನಡೆದ ಕಾಳಿ ಬ್ರಿಗೇಡ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಮೂಲಭೂತ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಲೇಬೇಕು. ಅದು ಸಂಘಟಿತವಾಗಿರಬಹುದು ಅಥವಾ ವೈಯಕ್ತಿವಾಗಿರಬಹುದು. ಈಗಿನ ರಾಜಕೀಯ ವ್ಯವಸ್ಥೆ ನೋಡಿದರೆ ಪ್ರತಿಯೊಬ್ಬರು ಹೋರಾಟ ಮಾಡುವ ಮನೋಭಾವ ತಾಳಬೇಕಿದೆ ಎಂದು ಕರೆ ನೀಡಿದರು.

ಜೊಯಿಡಾ ತಾಲ್ಲೂಕಿನ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣಕ್ಕಾಗಿ, ಪ್ರತಿ ವಿದ್ಯಾರ್ಥಿಗೆ ₹50 ಸಾವಿರದವರೆಗೆ ನೆರವು ಸಿದ್ದ ಎಂದ ಶ್ರೀಗಳು, ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ತಾಲ್ಲೂಕಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಭಾಗವಹಿಸಬೇಕು ಎಂದರು.

ADVERTISEMENT

ಶಿರಸಿಯ ಅತಿಕ್ರಮಣ ಸಕ್ರಮ ಹೋರಾಟಗಾರ ರವೀಂದ್ರನಾಥ ನಾಯ್ಕ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಅತಿಕ್ರಮಣ ಅರ್ಜಿಗಳು ಲಕ್ಷಗಟ್ಟಲೆ ಅಂಗೀಕಾರವಾಗಿ, ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಕೇವಲ 11 ಸಾವಿರ ಅರ್ಜಿಗಳು ಅಂಗೀಕಾರವಾಗಿದ್ದು, ಲಕ್ಷಾಂತರ ಅರ್ಜಿಗಳು ತಿರಸ್ಕರಿಸಲಾಗಿದೆ ಎಂದರು.

ಇದಕ್ಕೆ ನಮ್ಮ ರಾಜಕಿಯ ನಾಯಕರ ಇಚ್ಛಾಶಕ್ತಿಯ ಕೊರತೆ ಕಾರಣ. ಅಧಿಕಾರಿಗಳು ಜನರ ಅರ್ಜಿಗಳನ್ನು ಸರಿಯಾಗಿ ಪರೀಶಿಲಿಸಿದೆ, ತಿರಸ್ಕರಿಸಬಾರದು. ಇದಕ್ಕೆ ಅತಿಕ್ರಮಣದಾರರು ಹೆದರುವ ಅವಶ್ಯಕತೆ ಇಲ್ಲ. ಇದರ ವಿರುದ್ಧ ಕಡ್ಡಾಯವಾಗಿ ಎಲ್ಲರೂ ಮೇಲ್ಮನವಿ ಸಲ್ಲಿಸಬೇಕು ಎಂದು ಹೇಳಿದರು. ಕಾಳಿ ಬ್ರಿಗೇಡಿನ ಮುಖ್ಯ ಸಂಚಾಲಕ ರವಿ ರೇಡಕರ, ಪತ್ರಕರ್ತ ಪ್ರಕಾಶ ಶೇಟ್, ಸುನೀಲ ದೇಸಾಯಿ, ಸುದರ್ಶನ ಹೆಗಡೆ ಹಾಗೂ ಕೀರ್ತಿ ಹೆಗಡೆ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ಹಳಿಯಾಳದ ಸಂದೀಪ ಕುಮಾರ ಬೋಬಾಟೆ, ಖಾನಾಪುರದ ಎಮ್. ಜಿ. ದೇಸಾಯಿ, ಬಿ.ಪಿ.ಎಂ.ಕುಮಾರ, ಬಿ.ಎನ್. ವಾಸರೆ, ದಲಿತ ಸಂಘರ್ಷ ಸಮಿತಿ ಗೀರಿಶ ಎನ್ ಎಸ್, ವಿನಯ ದೇಸಾಯಿ, ಆನಂದ ಪೋಕಳೆ, ಪ್ರಭಾಕರ ನಾಯ್ಕ, ಕಿರಣ ನಾಯ್ಕ, ವಿಷ್ಣು ದೇಸಾಯಿ, ನಾರಾಯಣ ಹೆಬ್ಬಾರ, ಉದಯ ದೇಸಾಯಿ, ಸತೀಶ ನಾಯ್ಕ, ಅಜೀತ ಟೆಂಗ್ಸೆ ಹಾಗೂ ಗೋಪಿ ಮಹಾಲೆ ಇದ್ದರು. ಯಲ್ಲಾಪುರ, ಖಾನಾಪುರ, ಹಳಿಯಾಳ ತಾಲ್ಲೂಕಿನ ಗಣ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.