ಯಲ್ಲಾಪುರ: ‘ಎಲ್ಲವನ್ನೂ ಲೆಕ್ಕಾಚಾರದಲ್ಲಿ ನೋಡುವ ಸರ್ಕಾರದಲ್ಲಿ ಪ್ರಶಸ್ತಿ ಸೇರಿದಂತೆ ಎಲ್ಲದಕ್ಕೂ ಅರ್ಜಿ ಹಾಕಿಕೊಳ್ಳಬೇಕಾದ ಅನಿವಾ ರ್ಯತೆ ಇರುವುದು ವಿಪರ್ಯಾಸ. ಸರ್ಕಾರ ನೀಡುವ ಇಂತಹ ಪ್ರಶಸ್ತಿಗಳಿಗಿಂತ ಜನ ನೀಡಿದ ಸನ್ಮಾನ ಬಹಳ ದೊಡ್ಡದು’ ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.
ಶಿರಸಿಯ ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರ, ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಂಸ್ಥೆ, ಬೀಗಾರಿನ ನವೋದಯ ಯುವಕ ಸಂಘದ ಆಶ್ರಯದಲ್ಲಿ ವಜ್ರಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದ ‘ರಂಗಹಬ್ಬ 2014’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಂದಿನ ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಚಿತ್ರಗಳು ಬಿತ್ತರವಾಗುತ್ತಿರುವುದು ನಮ್ಮ ಸಂಸ್ಕೃತಿಗೆ ಕುತ್ತಾಗುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಆದರೆ ಗ್ರಾಮೀಣ ಭಾಗದ ಕಲಾ ರಾಯಭಾರಿಗಳು ಈ ಕೊರತೆಯನ್ನು ನೀಗಿಸುತ್ತಿದ್ದಾರೆ’ ಎಂದರು.
‘ಪ್ರಜಾವಾಣಿ’ ಸಂಪಾದಕ ಕೆ.ಎನ್. ಶಾಂತಕುಮಾರ್ ಮಾತನಾಡಿ, ‘ಗ್ರಾಮೀಣ ರಂಗ ಪ್ರತಿಭೆಗಳನ್ನು ಸನ್ಮಾನಿಸಿ, ಮಾಧ್ಯಮಗಳು ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ಯಬೇಕು ಎನ್ನುವ ಅಭಿಲಾಷೆಯನ್ನು ಪ್ರಜಾವಾಣಿ ಈಡೇರಿಸುತ್ತಿದೆ’ ಎಂದರು.
ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಮಾತನಾಡಿ, ‘ವಿಭಿನ್ನ ರಂಗಗಳಲ್ಲಿ ವಿಭಿನ್ನ ರೂಪಗಳಲ್ಲಿ ನಾಟಕಗಳನ್ನು ಅಭಿವ್ಯಕ್ತಿಗೊಳಿಸು ತ್ತಿರುವುದು ಕಲ್ಪನೆಗೂ ಮೀರಿದ್ದು’ ಎಂದರು.
ಗಣೇಶ ಕಿರಿಗಾರೆ, ಎಂ.ದತ್ತಾತ್ರೆಯ, ಆರ್.ಟಿ ಭಟ್ಟ, ಎಸ್.ಎನ್.ಗಾಂವ್ಕರ್, ಎಂ.ಎನ್.ಭಟ್ಟ ವೇದಿಕೆಯಲ್ಲಿದ್ದರು. ಗೋಪಾಲ ಭಟ್ಟ ನಡಿಗೆಮನೆ ಅಧ್ಯಕ್ಷತೆ ವಹಿಸಿದ್ದರು.
ನಾಟಕ ರಚನಾಕಾರ ಪ್ರಕಾಶ ಭಾಗವತ್ ತ್ಯಾರಗಲ್ ಹಾಗೂ ಗ್ರಾಮೀಣ ರಂಗ ಪ್ರತಿಭೆಗಳಾದ ಜಿ.ಲಕ್ಷ್ಮಿ, ಟಿ.ವಿ.ಕೋಮಾರ, ಸಾವೇರ ಫರ್ನಾಂಡಿಸ್, ಸತೀಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸತೀಶ ಹೆಗಡೆ ಮಾತನಾಡಿದರು.
ಡಿ.ಶಂಖರ ಭಟ್ಟ ಸ್ವಾಗತಿಸಿದರು. ರಂಗ ನಿರ್ದೇಶಕ ಕೆ.ಆರ್.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಜಿ.ಭಟ್ಟ ನಿರೂಪಿಸಿದರು. ಜಿ.ಎಸ್.ಗಾಂವ್ಕರ್ ವಂದಿಸಿದರು.
ರಂಗ ಹಬ್ಬದ ಅಂಗವಾಗಿ ಭಾನುವಾರ ವಜ್ರಳ್ಳಿಯಲ್ಲಿ ಕೆ.ಆರ್.ಪ್ರಕಾಶ ನಿರ್ದೇಶನದಲ್ಲಿ ‘ಒಂದು ಬಾವಿಯ ಕಥೆ’ ನಾಟಕ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.