ADVERTISEMENT

12 ದಿನದ ಹಸುಳೆಯನ್ನು ಬೆಂಕಿ ಹಚ್ಚಿ ಕೊಂದ ತಾಯಿ

ಭಟ್ಕಳ: ಮಗು ಜನಿಸಿದರೂ ನೋಡಲು ಗಂಡ ಬರಲಿಲ್ಲವೆಂದು ಬೇಸರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 9:44 IST
Last Updated 13 ಮಾರ್ಚ್ 2018, 9:44 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಭಟ್ಕಳ (ಉತ್ತರ ಕನ್ನಡ): ಮಗು ಹುಟ್ಟಿದರೂ ಪತಿ ನೋಡಲು ಬರಲಿಲ್ಲ ಎಂದು ನೊಂದ ಮಹಿಳೆಯೊಬ್ಬಳು ಇಲ್ಲಿನ ವೆಂಕಟಾಪುರದಲ್ಲಿರುವ ತನ್ನ ತವರು ಮನೆಯಲ್ಲಿ 12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಂದಿದ್ದಾಳೆ.

ಯಶೋದಾ ಗೋಪಾಲ ಮೊಗೇರ್ ಎಂಬುವರು ಮಾ.9ರಂದು ಈ ಕೃತ್ಯ ಎಸಗಿದ್ದಾರೆ. ಸುಟ್ಟು ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಮಹಿಳೆಯ ಸಹೋದರ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮಗು ಶನಿವಾರ ಮೃತಪಟ್ಟಿತು.

ಈ ಬಗ್ಗೆ ದೂರು ದಾಖಲಿಸಿಕೊಂಡ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಯಶೋದಾ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಭಾನುವಾರ ಹಾಜರುಪಡಿಸಿದರು. ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ADVERTISEMENT

ಮೂರು ವರ್ಷಗಳ ಹಿಂದೆ ಇದೇ ತಾಲ್ಲೂಕಿನ ಬೆಳ್ನಿಯ ಗೋಪಾಲ ಮೊಗೇರ್ ಅವರೊಂದಿಗೆ ಯಶೋದಾ  ಅವರ ಮದುವೆಯಾಗಿತ್ತು. ಮೂರು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ಪತಿ ಹಿಂತಿರುಗಿ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.