ADVERTISEMENT

ಉಳಿತಾಯ ಮನೋಭಾವವೂ ಮುಖ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 8:49 IST
Last Updated 6 ಫೆಬ್ರುವರಿ 2018, 8:49 IST

ಸಿದ್ದಾಪುರ: ‘ಅಗತ್ಯ ಇರುವುದನ್ನು ಮಾತ್ರ ಖರೀದಿ ಮಾಡುವ ಮನೋಭಾವ ಇರಬೇಕು. ಮಾರುಕಟ್ಟೆಯಲ್ಲಿ ಕಂಡಿದ್ದನ್ನೆಲ್ಲ ಖರೀದಿ ಮಾಡುವುದು ಸರಿಯಲ್ಲ’ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಹೆಗಡೆ ಕಾಗೇರಿ ಹೇಳಿದರು. ಪಟ್ಟಣದ ಟಿಎಸ್ಎಸ್ ಶಾಖೆಯಲ್ಲಿ ಮೂರು ದಿನಗಳ ಕಾಲ ನಡೆದ ಟಿಎಸ್ಎಸ್ ಹಬ್ಬದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘ಗಳಿಸಿದ್ದನ್ನು ಉಳಿತಾಯ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸಹಕಾರಿ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವ ಉದ್ದೇಶವಿಲ್ಲದೇ, ತನ್ನ ಸದಸ್ಯರ ಅವಶ್ಯಕತೆಯನ್ನು ಪೂರೈಸುವುದಕ್ಕೆ ಸಹಕಾರಿ ಸಂಘಗಳು ಮುಂದಾಗಬೇಕು. ಅಂತಹ ಕೆಲಸವನ್ನು ಟಿಎಸ್ಎಸ್ ಮಾಡುತ್ತಿದೆ’ ಎಂದು ಹೇಳಿದರು.

ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ, ‘ಪ್ರಾಮಾಣಿಕತೆ, ಪಾರದರ್ಶಕತೆಯಿಂದ ವ್ಯವಹರಿಸಿದರೆ ಯಾವುದೇ ಸಂಸ್ಥೆ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಟಿಎಸ್ಎಸ್ ಸಂಸ್ಥೆ ಸಹಕಾರಿ ಕ್ಷೇತ್ರಕ್ಕೆ ಮಾದರಿ ಸಂಸ್ಥೆಯಾಗಿದೆ’ ಎಂದರು. ಸಂಸ್ಥೆಯ ಕೃಷಿ ವಿಭಾಗದ ಕಟ್ಟಡ ನಿರ್ಮಿಸಲು ಸ್ಥಳ ನೀಡಿದ ಪ್ಯಾಡಿ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ADVERTISEMENT

ಹಬ್ಬದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರು: ಹಳೆ ಹಾಡು–ಸುಮಾ ಹೆಗಡೆ ಹೊಸೂರು (ಪ್ರಥಮ), ಗಂಗಾ ಹೆಗಡೆ ಕಂಚಿಮನೆ (ದ್ವಿತೀಯ), ನರ್ಮದಾ ಭಟ್ಟ ಹಿರೇಕೈ (ತೃತೀಯ),ಸೂಪರ್ ಮಿನಿಟ್–ವೀಣಾ ಶೇಟ್ ಸಿದ್ದಾಪುರ(ಪ್ರಥಮ), ಶಾಲಿನಿ ಜಿ.ಎನ್. ಹೊಸೂರು(ದ್ವಿತೀಯ), ವೀಣಾ ಹೆಗಡೆ ಭಾನ್ಕುಳಿ(ತೃತೀಯ), ಉಮಾ ಹೆಗಡೆ ಸಂಕದಮನೆ (ಚತುರ್ಥ),ಛದ್ಮವೇಷ–ವಿನೀತ ಕಶ್ಯಪ ಗುಂಜಗೋಡ (ಪ್ರಥಮ), ಶರಧಿ ಹೆಗಡೆ ಭಾನ್ಕುಳಿ( ದ್ವಿತೀಯ) ಹಾಗೂ ಶಿವಾಲಿ ಗೌಡ ಸಿದ್ದಾಪುರ (ತೃತೀಯ).

ಟಿಎಸ್‌ಎಸ್ ನಿರ್ದೇಶಕ ಆರ್.ಆರ್. ಹೆಗಡೆ ಐನಕೈ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪಟ್ಟರಾಜ ಗೌಡ, ಸಿಪಿಐ ಜಯಂತ ಎಂ., ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಬಿ.ಎಸ್., ಸಹಾಯಕ ಕೃಷಿ ನಿರ್ದೇಶಕ ಆರ್.ಪಿ. ಹೆಗಡೆ, ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇದ್ದರು. ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಸ್ವಾಗತಿಸಿದರು. ಲೋಕೇಶ ಭಟ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.