ಹೊನ್ನಾವರ: ‘ಶರಾವತಿ ನದಿಯ ತಟದಲ್ಲಿ ಕಲೋತ್ಸವ ಸಂಘಟಿಸಿ ಅದೇ ವೇದಿಕೆಯಲ್ಲಿ ಸಾಧಕರನ್ನು ಗೌರವಿಸುತ್ತಿರುವುದು ಉತ್ತಮ ಪರಂಪರೆಯಾಗಿದೆ’ ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯ್ಕ ಶ್ಲಾಘಿಸಿದರು.
ಶ್ರೀ ಜೈನ ಜಟಕೇಶ್ವರ ಯುವಕ ಸಂಘ, ಟೊಂಕ ಕಾಸರಕೋಡ ಇದರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ‘ಟೊಂಕ ಉತ್ಸವ’ ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಶ್ರೀರಾಮಚಂದ್ರನ ಶರದಿಂದ ಶರಾವತಿ ನದಿ ಹುಟ್ಟಿದಳು ಎಂಬ ಪ್ರತೀತಿ ಇದೆ. ಈ ನದಿಯ ತಟದ ಮಣ್ಣಿನಲ್ಲಿ ಅನೇಕ ಕಲೆ ಹಾಗೂ ಕಲಾವಿದರು ಜನ್ಮ ತಾಳಿದ್ದಾರೆ. ಸೈನಿಕರ ದಿನಾಚರಣೆಯ ಈ ದಿನ ಸಾಮಾಜಿಕ ಪಿಡುಗಾದ ಮದ್ಯಪಾನದ ವಿರುದ್ಧ ಹೋರಾಡಿದ ಮಹಿಳೆಯರನ್ನು ಹಾಗೂ ಇತರ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗಿದೆ. ಮೀನುಗಾರಿಕೆ ಉದ್ಯೋಗ ನಡೆಸುವ ಜನರೆಲ್ಲ ಸಂಘಟಿತರಾಗಿ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಅವರು ಸಲಹೆ ನೀಡಿದರು.
ಬ್ಯಾಂಕ್ ಉದ್ಯಮಿ ಜಿ.ಜಿ.ಶಂಕರ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಸಾರಂಗ,ವಿನಾಯಕ ಆಚಾರಿ, ಹನುಮಂತ ತಾಂಡೇಲ ಮಾತನಾಡಿದರು.
ಮದ್ಯಪಾನ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡ ಮಹಿಳೆಯರನ್ನು, ಸಾಧಕರನ್ನು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಭಾಸ್ಕರ ತಾಂಡೇಲ, ರಮೇಶ ತಾಂಡೇಲ, ಮಹೇಶ ತಾಂಡೇಲ, ಪೀತಾಂಬರ ಜಾಧವ ಉಪಸ್ಥಿತರಿದ್ದರು.
ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ‘ಮೂರು ಮುತ್ತು’ ತಂಡದಿಂದ ಹಾಸ್ಯಮಯ ನಾಟಕ ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.