ADVERTISEMENT

ಅಡವಿ ಅಡುಗೆಗಳ ಮರು ನೆನಪು 16ಕ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:20 IST
Last Updated 13 ಫೆಬ್ರುವರಿ 2019, 14:20 IST
ಅಡುಗೆಗೆ ಬಳಕೆಯಾಗುವ ಕಾಡು ಸಸ್ಯ (ಸಾಂದರ್ಭಿಕ ಚಿತ್ರ)
ಅಡುಗೆಗೆ ಬಳಕೆಯಾಗುವ ಕಾಡು ಸಸ್ಯ (ಸಾಂದರ್ಭಿಕ ಚಿತ್ರ)   

ಶಿರಸಿ: ಶತಮಾನಗಳ ಹಿಂದೆ ಮಲೆನಾಡು, ಕರಾವಳಿಯ ತಾಯಂದಿರು ಅಡುಗೆ ತಯಾರಿಯಲ್ಲಿ ಬಳಸುತ್ತಿದ್ದ ಸಸ್ಯಗಳ ಮರು ನೆನಪು ಮಾಡುವ ವಿಶೇಷ ಕಾರ್ಯಕ್ರಮ ಫೆ.16 ಮತ್ತು 17ರಂದು ತಾಲ್ಲೂಕಿನ ಕಳವೆ ಕಾನ್ಮನೆಯಲ್ಲಿ ನಡೆಯಲಿದೆ.

ಪಶ್ಚಿಮ ಘಟ್ಟದ 100 ಕ್ಕೂ ಹೆಚ್ಚು ಸಸ್ಯ ಬಳಸಿ ತಂಬುಳಿ, ಕಷಾಯ, ಚಟ್ನಿ, ಸಾಂಬಾರ್, ಕಟ್ನೆ, ಸಾಸ್ಮೆ, ಅಮ್ಟಿ, ಫಲ್ಯ, ಬಂಪು ತಯಾರಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಕರಾವಳಿ, ಮಲೆನಾಡಿನ 25 ಮಹಿಳೆಯರು ಎರಡು ದಿನಗಳಲ್ಲಿ 75 ರೀತಿಯ ಅಡುಗೆಗಳ ಪ್ರಾತ್ಯಕ್ಷಿಕೆ ನೀಡುವರು. ಬಿದರಕ್ಕಿಯ ಅನ್ನ, ಮರ ಬಾಳೆಕಾಯಿ ದೋಸೆ, ಕಾಡರಿಸಿನದ ಮಣ್ಣಿ ಮುಂತಾದ ಅಡುಗೆ ತಯಾರಿಸುವರು. ನೀರನ್ನು ಕಡಿಮೆ ಬಳಸಿ ಬೆಳೆಯುವ ಈ ಸಸ್ಯಗಳು ಬರಗಾಲದಲ್ಲಿ ಆಹಾರ ಸುಸ್ಥಿರತೆಯ ಆಧಾರವಾಗಿವೆ. ಇವು ಭವಿಷ್ಯದಲ್ಲಿ ಪರಿಸರ ಸ್ನೇಹಿ ಅಭ್ಯುದಯಕ್ಕೆ ದಾರಿಯಾಗಬಹುದು.

ಚಿಕ್ಕಮಗಳೂರು ಕೊಪ್ಪ ಆಯುರ್ವೇದ ಕಾಲೇಜಿನ ವೈದ್ಯ ಡಾ. ಭಾನು, ಸಾಗರದ ಡಾ. ಪತಂಜಲಿ, ಗೋಕರ್ಣದ ವೇದಶ್ರವ ಶರ್ಮ, ಜೊಯಿಡಾ ಗುಂದದ ನಾಟಿ ವೈದ್ಯ ಶ್ರೀಧರ ದೇಸಾಯಿ, ಜಿ.ಎಸ್. ಹೆಗಡೆ ಲಕ್ಕಿಸವಲು ಸಸ್ಯ ಬಳಕೆ ಕುರಿತು ಮಾಹಿತಿ ನೀಡುವರು. ಅರಣ್ಯ ಇಲಾಖೆಯ ಶಿರಸಿ ವಿಭಾಗದ ವಿವಿಧ ಅರಣ್ಯ ನರ್ಸರಿ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯ ಉಮಾಪತಿ ಕೆ.ವಿ. ಯವರ ಸಹಕಾರದೊಂದಿಗೆ ಅಡುಗೆಗೆ ಬಳಸುವ ಸಸ್ಯಗಳ ಪ್ರದರ್ಶನ ನಡೆಯಲಿದೆ.

ಫೆ.16ರ ಬೆಳಿಗ್ಗೆ 10.30ಕ್ಕೆ ವಿಜ್ಞಾನಿ ಹರೀಶ ಹಂದೆ ಕಾರ್ಯಕ್ರಮ ಉದ್ಘಾಟಿಸುವರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಡಿ. ಸುದರ್ಶನ್, ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ, ಸಾಮಾಜಿಕ ಕಾರ್ಯಕರ್ತ ಆರ್.ಎಸ್. ಹೆಗಡೆ ಹರಗಿ ಭಾಗವಹಿಸುವರು. ಕಳವೆ ಗ್ರಾಮದ ಹಿರಿಯರಾದ ಈರಾ ನಾರಾಯಣ ಗೌಡ ಅಧ್ಯಕ್ಷತೆ ವಹಿಸುವರು. ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಉಪಸ್ಥಿತರಿರುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.