ಬಂಧನ
(ಪ್ರಾತಿನಿಧಿಕ ಚಿತ್ರ)
ಅಂಕೋಲಾ: ರಸ್ತೆ ಬದಿಯಲ್ಲಿ ಮಲಗಿದ್ದ ದನಗಳನ್ನು ಕಳ್ಳತನ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ಅಂಕೋಲಾದಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ.
ತಾಲ್ಲೂಕಿನ ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಹತ್ತಿರ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಆಕಳುಗಳನ್ನು ಕಳ್ಳತನ ಮಾಡಿಕೊಂಡು ಕಾರಿನ ಹಿಂಬದಿ ಸೀಟಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿತರ ಬೆನ್ನಟ್ಟಿದ್ದಾರೆ.
ಇದೇ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಕಾರು ಹಾಯಿಸಲು ಯತ್ನಿಸಿ ತಪ್ಪಿಸಿಕೊಂಡು ಹೋದವರನ್ನು ಪೊಲೀಸರು ಹಿಂಬಾಲಿಸಿ ತಾಲ್ಲೂಕಿನ ಬೆಳಸೆ ಗ್ರಾಮದ ಹತ್ತಿರ ರಾ.ಹೆ-66 ರ ಚತುಷ್ಪಥ ರಸ್ತೆಯ ಫ್ಲೈಓವರ್ನ ಕೆಳಗೆ ಆರೋಪಿತರನ್ನು ಕಾರು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಸುರತ್ಕಲ್ ನಿವಾಸಿ ಅಬ್ದುಲ ಅಝೀಝ್ ತಂದೆ ಅಬ್ದುಲ ಖಾದರ್ (48), ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಮೊಹ್ಮದ್ ಮುಸ್ತಾಪ್ ತಂದೆ ಅಬ್ದುಲ ಹಮೀದ್ (25), ಮುಲ್ಕಿ ಕೊಲ್ನಾಡ್ ನಿವಾಸಿ ಮಹ್ಮದ ನುಹಾನ್ ಫರಿಷ್ ತಂದೆ ಅಬುಬಕ್ಕರ್(23), ಉಲ್ಲಾಳದ ನಿವಾಸಿ ಮಹ್ಮದ ಇರ್ಬಾಜ್ ಉಲ್ಲಾಳ್ ತಂದೆ ಮೊಹಮ್ಮದ್ ರಿಯಾಜ್(20), ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಮೊಹ್ಮದ ಆಸಿಕ್ ತಂದೆ ಅಶ್ರಫ್(22) ಅವರನ್ನು ಬಂಧಿಸಲಾಗಿದೆ.ಮೊಹಮ್ಮದ ಅಜೀಮ್ ಹಾಗೂ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾರೆ.
ಆರೋಪಿತರು ವಿವಿಧ ಪೊಲೀಸ್ ಠಾಣೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.