ಶಿರಸಿ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಗೊಂದಲ, ಇ–ಖಾತೆ ಸಮಸ್ಯೆ, ಬಿಡಾಡಿ ದನಗಳ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ನಗರಸಭೆ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ ಜೊತೆ ಚರ್ಚಿಸಿದರು.
ಮಂಗಳವಾರ ಇಲ್ಲಿ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಭೇಟಿ ಮಾಡಿದ ಅವರು, ನಗರಸಭೆಗೆ ಜನಪ್ರತಿನಿಧಿಗಳ ಆಯ್ಕೆಯಾಗಿ ಒಂದು ವರ್ಷ ಕಳೆದಿದೆ. ಆದರೆ, ಇನ್ನೂ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಇದರಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಪೌರಾಯುಕ್ತರ ಹುದ್ದೆ ಕೂಡ ಖಾಲಿಯಿದೆ. ಸಾರ್ವಜನಿಕರ ಕೆಲಸ–ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಮನವರಿಕೆ ಮಾಡಿಕೊಟ್ಟರು.
ನಗರ ವ್ಯಾಪ್ತಿಯಲ್ಲಿ ಫಾರ್ಮ್ ನಂಬರ್ 3 ವಿತರಣೆಯಾಗದೇ ಇರುವುದರಿಂದ ಮನೆ ಕಟ್ಟುವವರು, ಖಾತಾ ಬದಲಾವಣೆಗೆ ತೊಂದರೆಯಾಗಿದೆ. ಬಿಡಾಡಿ ದನ, ನಾಯಿ ಹಾವಳಿ ವಿಪರೀತವಾಗಿದೆ. ಇದರಿಂದ ಅಪಘಾತದ ಪ್ರಮಾಣಗಳೂ ಹೆಚ್ಚುತ್ತಿವೆ. ಕೊಂಡವಾಡೆ ಸುವ್ಯವಸ್ಥಿತಗೊಳಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ವೀಣಾ ಶೆಟ್ಟಿ, ಶರ್ಮಿಳಾ ಮಾದನಗೇರಿ, ಮಾಲತಿ ಶೆಟ್ಟಿ, ದೀಪಾ ಮಾಲಿಂಗಣ್ಣನವರ್, ಕಿರಣ ಆನೂರಶೆಟ್ಟರ್, ಮುಕ್ತಾ ಶೆಟ್ಟಿ, ಶ್ರೀಕಾಂತ ಬಳ್ಳಾರಿ, ರಾಘವೇಂದ್ರ ಶೆಟ್ಟಿ, ಆನಂದ ಸಾಲೇರ, ನಾಗರತ್ನಾ ಜೋಗಳೇಕರ, ಪ್ರಿಯಾ ನಾಯ್ಕ, ರಮಾಕಾಂತ ಭಟ್ಟ, ನಾಗರಾಜ ನಾಯ್ಕ, ಸಂಧ್ಯಾ ನಾಯ್ಕ, ಸುಮಿತ್ರಾ ಗಾಂವಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.